ವಾಡಿ: ಪಟ್ಟಣದ ಪುರಸಭೆಯ ಕಸದ ಬುಟ್ಟಿ ಖರೀದಿಯಲ್ಲಿ ಲಕ್ಷಾಂತರ ರೂಪಾಯಿಗಳ ಗೂಲಮಾಲ್ ಮಾಡಿ ವಿತರಣೆಯಲ್ಲೂ ತಾರತಮ್ಯ ಮಾಡಿದೆ, ಇದರ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪಟ್ಟಣದಲ್ಲಿ 2020-21ನೇ ಸಾಲಿನ 15ನೇ ಹಣಕಾಸಿನಲ್ಲಿ ಮಂಜೂರಾದ ಕಸದ ಬುಟ್ಟಿಗಳನ್ನು 2024-25ರಲ್ಲಿ ಅದನ್ನು ಕೆಲವೊಂದು ವಾರ್ಡ್’ಗಳಲ್ಲಿ ಬೇಕಾಬಿಟ್ಟಿಯಾಗಿ ವಿತರಣೆ ಮಾಡಿ ಅದರ ಅಂಕಿ ಅಂಶಗಳನ್ನು ಸಹ ಸಮರ್ಪಕವಾಗಿ ನೊಂದಾಯಿಸದೆ ಇಲ್ಲಿನ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ.
ವಾರ್ಡ್ ಸಂಖ್ಯೆ 23, 21, 22, 09,10, 04, 01, 02ರಲ್ಲಿ ಇನ್ನೂ ಹಂಚಿಕೆಯಾಗಿಲ್ಲ, ಇದರ ಹಂಚಿಕೆಯನ್ನು ಈ ಸಾಲಿನ ಟೆಂಡರ್’ನಲ್ಲಿ ಮಾರ್ಪಡಿಸಿ ಲಕ್ಷಾಂತರ ರೂಪಾಯಿನ್ನು ಕಸದ ಬುಟ್ಟಿಯ ಹೆಸರಿನಲ್ಲಿ ಲಪಟಾಯಿಸುವ ಯೋಜನೆ ಹಾಕಿಕೊಂಡಿರುವ ಮಾಹಿತಿ ಬಂದಿದೆ, ಅಂಗವಿಕಲರಿಗಾಗಿ (ವಿಕಲಚೇತನರಿಗೆ) ಬಂದಿರುವ ಲಕ್ಷಾಂತರ ರೂಪಾಯಿಗಳ ಎಂಟು ಹತ್ತು ತ್ರಿಚಕ್ರ ವಾಹನಗಳು ಕೂಡಾ ವಿತರಣೆ ಮಾಡದೆ ಹಾಗೆ ಕೊಳೆಯುತ್ತಿವೆ, ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಒಂದು ವರ್ಷದ ಹಿಂದೆಯೆ ಇಲ್ಲಿನ ಅವ್ಯವಹಾರದ ಸಂಪೂರ್ಣ ಮಾಹಿತಿ ನೀಡಿದರು ಯಾವುದೆ ಕ್ರಮಕ್ಕೆ ಮುಂದಾಗಿಲ್ಲ, ಮೇಲಾಧಿಕಾರಿಗಳು ಸಹ ಇದರಲ್ಲಿ ಶಾಮೀಲಾಗಿರುವ ಅನುಮಾನ ಕಾಡುತ್ತಿದೆ. ಇದನ್ನು ಈಗಲಾದರೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇಲ್ಲದೆ ಹೋದರೆ ನಾವು ಸಾರ್ವಜನಿಕ ಸಂಪತ್ತಿನ ರಕ್ಷಣೆಗಾಗಿ ಕೆಲವೇ ದಿನಗಳಲ್ಲಿ ಪುರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಪತ್ರದ ಮೂಲಕ ಎಚ್ಚರಿಸಿದ್ದಾರೆ.