ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದಿಂದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ನೇತೃತ್ವದಲ್ಲಿ ಜ.28 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಅಂಬಿಗರ ಚೌಡಯ್ಯ ಭವನದ ಸಮೀಪ ಜ.28 ರಂದು ಮಧ್ಯಾಹ್ನ 1 ಗಂಟೆಗೆ ಶೋಭಾಯಾತ್ರೆಯಲ್ಲಿ ತೊನಸನಹಳ್ಳಿ (ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನದ ಮಲ್ಲಣಪ್ಪ ಮಹಾಸ್ವಾಮಿ, ಶಹಾಪೂರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಸಾನಿಧ್ಯದಲ್ಲಿ ನಡೆಯಲಿದೆ.
ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಅವರು ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಬೃಹತ್ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ ಎಂದು ಹೇಳಿದ್ದಾರೆ.
ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯಾಗಿ ಬೃಹತ್ ಶೋಭಾಯಾತ್ರೆ ಮೆರವಣಿಗೆ ನಡೆಯಲಿದೆ.
ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ತಾಲೂಕು ಕೋಲಿ ಸಮಾಜ, ತಾಲೂಕು ಯುವ ಕೋಲಿ ಸಮಾಜ, ನಗರ ಘಟಕ ಮತ್ತು ನಗರ ಯುವ ಘಟಕದ ಪದಾಧಿಕಾರಿಗಳು ಬೃಹತ್ ಶೋಭಾಯಾತ್ರೆಯ ಸಿದ್ದತೆಯಲ್ಲಿ ತೊಡಗಿದ್ದಾರೆ. ಸಮಾಜದ ಹಿರಿಯರು, ಯುವಕರು, ಮಹಿಳೆಯರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಸುರೇಶ ಬೆನಕನಹಳ್ಳಿ, ಹಣಮಂತ ಸಂಕನೂರು, ದೇವಿಂದ್ರ ಅರಣಕಲ್ ಮನವಿ ಮಾಡಿದ್ದಾರೆ.