ಸುದ್ದಿ ಸಂಗ್ರಹ ಹಾಸನ
ಚಲಿಸುತ್ತಿದ್ದ ಖಾಸಗಿ ಬಸ್ನ ಟೈರ್ ಸ್ಫೋಟಗೊಂಡ ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಹೊತ್ತಿ ಉರಿದಿದ್ದು, ಬಸ್ನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಹಾಸನ ತಾಲೂಕಿನ, ಶಾಂತಿ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿ 36 ಜನ ಪ್ರಯಾಣಿಸುತ್ತಿದ್ದರು. ಶಾಂತಿ ಗ್ರಾಮದ ಬಳಿ ಬಸ್ನ ಟೈರ್ ಸ್ಫೋಟಗೊಂಡಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ರಸ್ತೆಯಲ್ಲಿ ಬಸ್ ನಿಲ್ಲಿಸಿದ್ದು, ಬಸ್ ನಿಲ್ಲಿಸುತ್ತಿದ್ದಂತೆ ಎಲ್ಲಾ ಪ್ರಯಾಣಿಕರು ಕೆಳಗಿಳಿದಿದ್ದಾರೆ. ನಂತರ ಇಡಿ ಬಸ್ಗೆ ಬೆಂಕಿ ಆವರಿಸಿದ್ದು ಖಾಸಗಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗಾಬರಿಯಿಂದ ಪ್ರಯಾಣಿಕರು ಕೆಳಗಿಳಿದಿದ್ದು ಹಲವು ಪ್ರಯಾಣಿಕರ ಮೊಬೈಲ್, ಲಗೇಜ್ ಬೆಂಕಿಗಾಹುತಿಯಾಗಿದೆ. ಅತಿ ವೇಗದಿಂದ ಬಸ್ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಪ್ರಯಾಣಿಕರು ಬೇರೆ ಬಸ್ನಲ್ಲಿ ತೆರಳಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಅಷ್ಟರಲ್ಲಿ ಖಾಸಗಿ ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.