ಸುದ್ದಿ ಸಂಗ್ರಹ ಶಹಾಬಾದ
ಶಿವಯೋಗಿಗಳು ತಮ್ಮ ತತ್ವೋಪದೇಶಗಳ ಮೂಲಕ ಜಾತಿ–ಭೇದ, ಅಸಮಾನತೆ ವಿರುದ್ಧ ಹೋರಾಡಿ ಶಾಂತಿ, ಸಹಬಾಳ್ವೆ ಮತ್ತು ಕಾಯಕದ ಮಹತ್ವ ಸಮಾಜಕ್ಕೆ ಬೋಧಿಸಿದ್ದಾರೆ. ವಚನಗಳ ಮೂಲಕ ನೀಡಿದ ತತ್ವ, ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ತಹಸೀಲ್ದಾರ್ ನೀಲಪ್ರಭಾ ಬಬಲಾದ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಇವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ.12ನೇ ಶತಮಾನದಲ್ಲಿ ಸಿದ್ದರಾಮೇಶ್ವರರು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬಂದಿದೆ. 1,379 ವಚನಗಳು ನಮಗೆ ಲಭ್ಯವಿರುವುದನ್ನು ಎಂ.ಎಂ ಕಲಬುರಗಿ ಅವರು ಬರೆದ ಪುಸ್ತಕದಲ್ಲಿ ಕಾಣುತ್ತೆವೆ ಎಂದರು.
ತಾವು ನಿರ್ವಹಿಸುವ ಕಾಯಕವನ್ನು ಶ್ರದ್ಧೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ಧಾಂತಗಳು ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ಜೀವನ ನಡೆಸಲು ಸಾಧ್ಯ ಎಂದರು.
ನಗರ ಪೊಲೀಸ್ ಠಾಣೆಯ ಪಿ.ಐ ಪರಶುರಾಮ ವನಂಜಕರ ಮಾತನಾಡಿ, ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಅದರ್ಶ ತತ್ವಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಗುರುರಾಜ
ಸಂಗಾವಿ, ಬೋವಿ ವಡ್ಡರ ಸಮಾಜದ ಅಧ್ಯಕ್ಷ ರಾಜು
ಮೇಸ್ತ್ರಿ, ತಾ.ಪಂ ಮಾಜಿ ಅಧ್ಯಕ್ಷ ಸುಭಾಷ ಚೌಧರಿ, ಸಮಾಜದ ಮುಖಂಡರಾದ ಭಗವಾನ ದಂಡಗುಲಕರ್, ಕನಕಪ್ಪ ದಂಡಗುಲಕರ್, ಕಳ್ಳೊಳ್ಳಿ ಕುಸಾಳೆ, ಸಂಜಯ ವಿಟ್ಕರ್, ಶ್ರೀನಿವಾಸ ನೇದಲಗಿ, ಭಾನು ಪವಾರ, ಸಿದ್ದರಾಮ ಕುಸಾಳೆ, ರಮೇಶ್ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.