ಕಲಬುರಗಿ: ಗಿರೀಶ್ ಕಾರ್ನಾಡ ನಾಟಕಕಾರ, ರಂಗಕರ್ಮಿ, ಲೇಖಕ, ಸಿನಿಮಾ ನಟ, ನಿರ್ದೇಶಕ, ಚಿಂತಕ, ಹೋರಾಟಗಾರ, ವಿಮರ್ಶಕರಾಗಿ ಬಹುಮುಖ ವ್ಯಕ್ತಿತ್ವದ ಮಹಾನ ಸಾಧಕ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಅವರ ಕೊಡುಗೆ ಅನನ್ಯ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಮತ್ತು ಶಿವಾ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಸರಣಿ ಉಪನ್ಯಾಸ ಕಾರ್ಯಕ್ರಮ-12 ಮತ್ತು ಬಳಗದ 5999ನೇ ಕಾರ್ಯಕ್ರಮ ‘ಕನ್ನಡಕ್ಕೆ ಡಾ.ಗಿರೀಶ್ ಕಾರ್ನಾಡ್ರ ಕೊಡುಗೆ’ ಎಂಬ ವಿಶೇಷ ಉಪನ್ಯಾಸದಲ್ಲಿ ಕಾರ್ನಾಡ್ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ಯಯಾತಿ’, ‘ತಲೆದಂಡ’, ‘ಹಯವದನ’, ‘ಅಂಜುಮಲ್ಲಿಗೆ’, ‘ನಾಗಮಂಡಲ’ ಸೇರಿದಂತೆ ಮುಂತಾದ ನಾಟಕಗಳು ರಚಿಸಿದ್ದಾರೆ. ರಾಜ್ಯೋತ್ಸವ, ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗುವ ಮೂಲಕ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪ್ರತಿಭಾವಂತ, ಪ್ರಗತಿಪರ ಲೇಖಕರಾಗಿ ನಾಡಿಗೆ ತಮ್ಮದೆಯಾದ ಸೇವೆ ಸಲ್ಲಿಸಿದ್ದಾರೆ ಎಂದರು.
ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಸಿಬ್ಬಂದಿ ಸುನೀತಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ, ಅದಿತಿ ಸೇರಿದಂತೆ ಅನೇಕರು ಇದ್ದರು.