ಪ್ರಥಮ ಚಿಕಿತ್ಸೆ ಜೀವ ರಕ್ಷಕ: ಡಾ.ರಾಜಶೇಖರ ಪಾಟೀಲ

ನಗರದ

ಕಲಬುರಗಿ: ಯಾವುದೆ ರೀತಿಯ ಅಪಘಾತ, ದೇಹವು ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆ ತೆರಳುವಕ್ಕಿಂತ ಮುಂಚಿತವಾಗಿ, ಮನೆ ಅಥವಾ ಅಫಘಾತವಾದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಥಮ ಚಿಕಿತ್ಸೆ ಮಾಡುವುದು ತುಂಬಾ ಅವಶ್ಯಕ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ್ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಪ್ರಥಮ ಚಿಕಿತ್ಸೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಪ್ರಥಮ ಚಿಕಿತ್ಸೆ ವೈದ್ಯರೆ ಮಾಡಬೇಕೆಂಬುದು ಏನಿಲ್ಲ. ಮನೆಯಲ್ಲಿ ಇರುವ ಕುಟುಂಬಸ್ಥರಿಗೆ, ಜೊತೆಗಾರರಿಗೆ ಸಂದರ್ಭಕ್ಕನುಸಾರ ಪ್ರಥಮ ಚಿಕಿತ್ಸೆ ಮಾಡಿ ಜೀವ ಉಳಿಸುವುದು ತುಂಬಾ ಅಗತ್ಯ ಎಂದರು.

ವಿಶೇಷ ಉಪನ್ಯಾಸ ನೀಡಿದ ದೈಹಿಕ ಶಿಕ್ಷಕ ಹಾಗೂ ಜೆಆರ್‌ಸಿ ಸಂಯೋಜಕ ಗುರುಲಿಂಗಯ್ಯ ಮಠ ಮಾತನಾಡಿದ, ಅಫಘಾತ ಸಂಭವಿಸಿದಾಗ, ಗಾಯವಾದ ಭಾಗವನ್ನು ಸ್ವಚ್ಛಗೊಳಿಸಿ ರಕ್ತ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಯಾವುದೆ ಕಾರಣಕ್ಕೂ ಧೃತಿಗೆಡಬಾರದು. ಜ್ವರಕ್ಕೆ ತಣ್ಣನೆ ಬಟ್ಟೆಯಿಂದ ಮೈಯೆಲ್ಲಾ ಒರೆಸುವುದು, ವಾಂತಿ-ಬೇಧಿಗೆ ಸಕ್ಕರೆ ಪಾನಕ ನೀರನ್ನು ಕುಡಿಸುವುದು, ಹೃದಯಘಾತ ಸಂಭವಿಸುವ ಲಕ್ಷಣ ಕಂಡುಬಂದರೆ ಅದೆ ಸ್ಥಳದಲ್ಲಿ ಸ್ಥಿರವಾಗಿ ಕುಳಿತುಕೊಳ್ಳುವುದು, ಮೋರ್ಛೆ ರೋಗ ಉಂಟಾದರೆ ತಕ್ಷಣ ಬಲಬದಿಯಲ್ಲಿ ಮಲಗಿಸಬೇಕು, ಕೈ-ಕಾಲು ಚಲಿಸದಂತೆ ನೋಡಿಕೊಳ್ಳವುದು, ಚೇಳು ಮತ್ತು ಹಾವಿನಂತಹ ವಿಷಪೂರಿತ ಜೀವಿಗಳು ಕಡಿದರೆ, ತಕ್ಷಣವೇ ಆ ಸ್ಥಳವನ್ನು ಬ್ಲೇಡ್‌ನಿಂದ ಪ್ಲಸ್ ಆಕಾರಲ್ಲಿ ಕತ್ತರಿಸಿ, ವಿಷಪೂರಿತ ರಕ್ತವನ್ನು ಹೊರಹಾಕಬೇಕು ಮತ್ತು ಕಡಿದ ಸ್ಥಳದ ಮೇಲ್ಭಾಗದಲ್ಲಿ ಬಟ್ಟೆಯಿಂದ ಕಟ್ಟಬೇಕು. ಇದರಿಂದ ವಿಷ ಮೈತುಂಬಾ ಹರಡುವುದಿಲ್ಲ, ಅಲ್ಲದೆ ಅಪಘಾತ ಅನೇಕ ಕಾಯಿಲೆಗಳಿಗೆ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್, ಆಸ್ಪತ್ರಗೆ ತೆರಳಿಯೇ ಚಿಕಿತ್ಸೆ ಪಡೆಯುತ್ತೆವೆಂಬ ಮನೋಭಾವನೆ ಜೀವಕ್ಕೆ ತೊಂದರೆ ಮಾಡುತ್ತದೆ. ಮುಂಚಿತವಾಗಿ ಪ್ರಥಮ ಚಿಕಿತ್ಸೆ ಮಾಡಿ, ನಂತರ ಆಸ್ಪತ್ರೆಗೆ ತೆರಳಿದರೆ ರೋಗಿಗೆ ಆತ್ಮವಿಶ್ವಾಸ ಬರುವುದರ ಜೊತೆಗೆ, ವೈದ್ಯರಿಗೂ ಕೂಡಾ ಚಿಕಿತ್ಸೆ ನೀಡಲು ಅನಕೂಲವಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವ ಸ್ಥಿತಿಯಲ್ಲಿ ಇದು ಜೀವ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ಹೆನ್ರಿ ಡ್ಯೂನಾಂಟ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕ ಅಸ್ಲಾಂ ಶೇಖ್ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *