ಕಲಬುರಗಿ: ಹುಯಿಲಗೋಳ್ ನಾರಾಯಣರಾಯರು ಆಧುನಿಕ ಕನ್ನಡ ಸಾಹಿತ್ಯದ ನಾಟಕಕಾರ ಮತ್ತು ಸ್ವಾತಂತ್ರ್ಯ ಹೋರಾಟಗಾರ. ರಾಜ್ಯದ ಉದಯಕ್ಕೆ ಸ್ಪೂರ್ತಿ ನೀಡಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡ” ಅಂದಿನ ರಾಜ್ಯ ಗೀತೆಯನ್ನು ರಚಿಸಿದ ಪ್ರಸಿದ್ಧ ಕವಿಯಾಗಿದ್ದಾರೆ. ನಾಡಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಖಾದ್ರಿ ಚೌಕ್ ನ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಹುಯಿಲಗೋಳ ನಾರಾಯಣರಾಯರ್ 140ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದಯವಾಗಲಿ ಚೆಲುವ ಕನ್ನಡ ನಾಡು ಹಾಡು ಕೇಳಿದ ಕೂಡಲೇ ಕನ್ನಡಿಗರ ಕಿವಿ ನೆಟ್ಟಗಾಗುತ್ತದೆ. ಮನಸ್ಸು ಆ ಹಾಡಿನ ಸಾಲುಗಳು ಪುನರುಚ್ಚರಿಸತೊಡಗುತ್ತೆ ಎಂದರು.
ಆ ಹಾಡಿನಲ್ಲೊಂದು ಆಪ್ತಭಾವ ಇದೆ, ನಮ್ಮ ನಾಡು, ನುಡಿಯ ಪ್ರೀತಿಯ ಪ್ರತೀಕ ಅದು. ಕರ್ನಾಟಕದ ನಾಡಗೀತೆಯೆಂದೇ ಅಂದು ಜನಪ್ರಿಯವಾಗಿದ್ದ ಹಾಡು ಇದು. ಈ ಗೀತೆ ರಚನೆಕಾರ ಸದಾ ಸ್ಮರಣೀಯರು. ಅವರಿಗೆ ಅನೇಕ ಪ್ರಶಸ್ತಿ-ಗೌರವಗಳು ದೊರೆತಿವೆ. ಇಂತಹ ಮಹನೀಯರ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್ ಬಿರಾದಾರ, ಸಂಸ್ಥೆಯ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ ಮತ್ತು ವಿದ್ಯಾರ್ಥಿಗಳು ಇದ್ದರು.