ಸುದ್ದಿ ಸಂಗ್ರಹ ಶಹಾಬಾದ್
ದೇಶದ ಗಡಿಗಳಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಸೇವೆ ಮತ್ತು ತ್ಯಾಗವನ್ನು ಪ್ರತಿಯೊಬ್ಬರು ಅರಿಯಬೇಕು, ಗೌರವಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ್ ಹೇಳಿದರು.
ನಗರದ ಚವ್ಹಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎನ್ಸಿ ಇಂಗಿನಶೆಟ್ಟಿ ಶಾಲೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ತಮ್ಮ ಜೀವನವನ್ನೆ
ಮುಡುಪಾಗಿಟ್ಟು ಹೋರಾಡಿದ್ದಾರೆ, ಅವರ ತ್ಯಾಗ- ಬಲಿದಾನದ ಫಲವಾಗಿ ಇಂದು ಸ್ವಾತಂತ್ರ್ಯ ಬದುಕು ನಡೆಸುತ್ತಿದ್ದೆವೆ. ದೇಶದ ಗಡಿ ಕಾಯುವ ಯೋಧರು ಪ್ರತಿಕೂಲ ಹವಾಮಾನದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆಯಿಂದ ದೇಶದ ಜನರು
ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ, ವಿದ್ಯಾರ್ಥಿಗಳು, ಯುವ ಜನರು ದೇಶದ ಇತಿಹಾಸ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕರು ತಮ್ಮದೆಯಾದ ಕೊಡುಗೆ ನೀಡಬೇಕು ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಜಯಶ್ರೀ ಅಕ್ಕ ಮಾತನಾಡಿ, ಅಹಿಂಸೆಯಿಂದ ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಮಹಾತ್ಮ ಗಾಂಧಿಜಿ ಇಡಿ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಹಲವು ಮಹನೀಯರ ತ್ಯಾಗ, ಬಲಿದಾನದ ಪ್ರತೀಕವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೆವೆ. ವಿವಿಧ ಜಾತಿ, ಧರ್ಮಗಳ ದೇಶದಲ್ಲಿ ಪ್ರತಿಯೊಬ್ಬರು ನಿರಾತಂಕವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದಾದರೆ ಅದಕ್ಕೆ ಸಂವಿಧಾನವೆಂಬ ಬಹುದೊಡ್ಡ ಅಸ್ತ್ರ್ರವಿರುವುದೇ ಕಾರಣ. ಸಂವಿಧಾನದಡಿ ಪ್ರತಿಯೊಬ್ಬರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟು ಜೀವಿಸುತ್ತಿದ್ದಾರೆ ಎಂದರು.
ಶಿಕ್ಷಕಿ ಅಂಬಿಕಾ ಜಿಂಗಾಡೆ, ಆರತಿ ಸಾತ್ಯಾಳ, ಯುಸೂಫ್ ನಾಕೇದಾರ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ದಶರಥ ಅಣ್ಣ, ಸುಧಾರಾಣಿ ಚವ್ಹಾಣ ವೇದಿಕೆಯಲ್ಲಿದ್ದರು.
ಆಡಳಿತ ಮುಖ್ಯಸ್ಥ ದೇವಿಂದ್ರ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಅರವಿಂದ ಚವ್ಹಾಣ ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯ ಮಹೋತ್ಸದ ನಿಮಿತ್ತ ನಗರದ ಮುಖ್ಯ ರಸ್ತೆಯಲ್ಲಿ ಪ್ರಭಾತ ಫೇರಿ ನಡೆಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮಹೇಬೂಬಿ, ಅಕ್ಕಮಹಾದೇವಿ, ಸುಜಾತ ಕುಂಬಾರ ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮವನ್ನು ಶ್ರೀದೇವಿ ಭಾಸಗಿಮಠ ನಿರೂಪಿಸಿದರು, ಉಷಾರಾಣಿ ಸ್ವಾಗತಿಸಿದರು, ಶಹನಾಜ್ ವಂದಿಸಿದರು.