ಸುದ್ದಿ ಸಂಗ್ರಹ ಕಾರವಾರ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಆರೋಪಿಗಳಿಗೆ ಶಿರಸಿಯ ಜಿಲ್ಲಾ ಪ್ರಧಾನ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
2006ರ ಪೆಬ್ರವರಿ ತಿಂಗಳಲ್ಲಿ ಸಿದ್ದಾಪುರದ ಅವರಗುಪ್ಪದಲ್ಲಿ ವಸಂತ್ ನಾಯ್ಕ ಹತ್ಯೆ ನಡೆದಿತ್ತು. ಈ ಪ್ರಕರಣ ಸಂಬಂಧ ಕಮಲಾಕರ್ ಭಟ್, ಸುಚಿತ್ರ ಸೇರಿ ಒಟ್ಟು 9 ಜನ ಆರೋಪಿಗಳಾಗಿದ್ದು, 8 ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ ಒರ್ವ ನಾಪತ್ತೆಯಾಗಿದ್ದರೆ, ಮತ್ತೋರ್ವನಿಗೆ ಬೇಲ್ ದೊರೆತಿತ್ತು. ಇನ್ನು ಉಳಿದ 7 ಜನರು ಕಳೆದ 6 ತಿಂಗಳಿಂದ ಕಾರವಾರದ ಜೈಲಿನಲ್ಲಿದ್ದು, ಶಿರಸಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆದಿತ್ತು.
ಆದರೆ ನ್ಯಾಯಾಲಯವು ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ, ಲೋಕನಾಥ್, ಮಹ್ಮದ್ ಮೆಹಫೂಪ್, ಮಹ್ಮದ್ ಫೈಸಲ್, ಇರ್ಫಾನ್, ಆಕಾಶ್ಗೆ ಜಾಮೀನು ನಿರಾಕರಣೆ ಮಾಡಲಾಗಿದೆ. ಕಮಲಾಕರ್ ಭಟ್ ವಿರುದ್ಧ ಹತ್ಯೆ ಸಂಬಂಧ ಶಿರಸಿ ನ್ಯಾಯಾಲಯ ಮತ್ತು ಲೈಂಗಿಕ ಕಿರುಕುಳ ಆರೋಪದ ಸಂಬಂಧ ಕಾರವಾರದಲ್ಲಿ ಪ್ರಕರಣ ಇದ್ದು, ಎರಡು ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಹತ್ಯೆ ಸಂಬಂಧ ಸಲ್ಲಿಕೆಯಾದ ಅರ್ಜಿ ತಿರಸ್ಕೃತಗೊಂಡಿದೆ.