ವಾಡಿ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರ ಅವರು ಮಲ್ಲಮ್ಮ ಹೇಮರೆಡ್ಡಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಕ್ಷದ ಮುಖಂಡರು ಪರಸ್ಪರ ಸಿಹಿ ಹಂಚಿ ಜಯಂತಿ ಆಚರಿಸಿದರು.
ತಾಲೂಕಕಿನ ಮಂಡಲ ಅಧ್ಯಕ್ಷ ರವಿ ಸಜ್ಜನಶೆಟ್ಟಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, 14ನೇ ಶತಮಾನದ ಸ್ತ್ರೀಕುಲದ ದೇವತೆ ಹೇಮರೆಡ್ಡಿ ಮಲ್ಲಮ್ಮ ಅವರು ತಮ್ಮ ಬದುಕಿನಲ್ಲಿ ಎದುರಿಸಿದ ಸಂಕಷ್ಟಗಳನ್ನೆ ಸಾಧನೆಯ ಮೆಟ್ಟಿಲುಗಳನ್ನಾಗಿ ಬದಲಾಯಿಸಿ ಸಮಾಜದ ಒಳಿತಿಗೆ ಶ್ರಮಿಸಿದರು. ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತಕ್ಕಾಗಿ ಸದಾ ಶ್ರಮಿಸಬೇಕು ಎಂದರು.
ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಮಲ್ಲಮ್ಮ ಅವರ ಸುತ್ತ ಸಾಕಷ್ಟು ಪವಾಡಗಳಿದ್ದರೂ ಅವರು ನಡೆದುಕೊಂಡ ಜೀವನ ಸಾಮಾನ್ಯವಾಗಿದೆ. ಸಮಾಜದ ಏಳ್ಗೆಗೆ ನಿರಂತರ ಶ್ರಮಿಸಿದ್ದ ಇವರ ವಿಚಾರಗಳು ಭವಿಷ್ಯದ ಪೀಳಿಗೆಗೆ ಸಿಗುವುದು ಅಗತ್ಯವಿದೆ ಎಂದರು.
ಅವರು ಸಾರಿದ ಮೌಲ್ಯ ಮತ್ತು ತತ್ವಗಳಿಗೆ ಬದ್ಧವಾಗಿ ನಡೆದುಕೊಂಡ ಹೇಮರೆಡ್ಡಿ ಮಲ್ಲಮ್ಮನವರು ಪ್ರಸಕ್ತ ಸಮಾಜದ ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯರು. ಸಂಸಾರದ ಎಲ್ಲ ನೋವು-ನಲಿವುಗಳನ್ನು ಅನುಭವಿಸಿದ ಇವರು ಭಿನ್ನವಾಗಿ ನಿಲ್ಲಲು ಇವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಕಾರಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ರವೀಂದ್ರ ವಾಲ್ಮೀಕ ನಾಯಕ, ಅಶೋಕ ಪವಾರ, ನಾಗರಾಜಗೌಡ ಗೌಡಪ್ಪನೂರ, ಮಹಾಂತೇಶ ಬಿರಾದಾರ,ಚಂದು ಚವ್ಹಾಣ, ಕರಣ ರಾಠೋಡ ಸೇರಿದಂತೆ ಅನೇಕರು ಇದ್ದರು.