ಸಾಧನೆಗೆ ಪ್ರೋತ್ಸಾಹಿಸುವುದು ಅಗತ್ಯ: ಕೋಳ್ಕೂರ

ತಾಲೂಕು

ಸುದ್ದಿ ಸಂಗ್ರಹ ಕಲಬುರಗಿ
ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಲಿ, ಅವರಿಗೆ ಗುರುತಿಸಿ, ಪ್ರೋತ್ಸಾಹಿಸುವುದು ಅಗತ್ಯ. ಇದರಿಂದ ಸಾಧನೆಗೆ ಮತ್ತಷ್ಟು ಸ್ಪೂರ್ತಿ ನೀಡಿದಂತಾಗುತ್ತದೆ ಎಂದು ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳ್ಕೂರ ಹೇಳಿದರು.

ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜರುಗಿದ ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ದೊಡ್ಡಮಬಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸುಸಜ್ಜಿತ ಕಟ್ಟಡ, ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ, ಎನ್’ಎಸ್’ಎಸ್ ರೋವರ್ & ರೇಂಜರ್ಸ್, ಭಾರತ ಸೇವಾ ದಳ, ಈಕೋ ಕ್ಲಬ್, ರೆಡ್ ಕ್ರಾಸ್, ಇಎಲ್’ಸಿ ಕ್ಲಬ್, ಸಾಂಸ್ಕೃತಿಕ ಮತ್ತು ವಿದ್ಯಾರ್ಥಿ ಸಂಘಗಳ ಮೂಲಕ ನಿರಂತರವಾಗಿ ಚಟುವಟಿಕೆಗಳು ಹಮ್ಮಿಕೊಂಡು, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸಿದ್ದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಪಿಯುಸಿ ಪ್ರಥಮ ವರ್ಷದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಪ್ರಾರಂಭವಾಗಿದ್ದು, ತಾಲೂಕಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಟಾಪರ್ಸಗೆ ಸನ್ಮಾನ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ‌ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಜೈಭೀಮ, ಮಲ್ಲಿಕಾರ್ಜುನ, (ಕಲಾ ವಿಭಾಗ), ಮಲ್ಲಿಕಾರ್ಜುನ, ವೀರೇಶ, ಮಹೇಶ (ವಾಣಿಜ್ಯ ವಿಭಾಗ), ರವಿತೇಜ, ಮಮತಾ, ಸತೀಶ (ವಿಜ್ಞಾನ ವಿಭಾಗ) ಅವರಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು.

ಉಪನ್ಯಾಸಕರಾದ ಎಚ್.ಬಿ ಪಾಟೀಲ, ದುಂಡಪ್ಪ ಯರಗೋಳ, ಗ್ರಂಥಪಾಲಕ‌ ಲಿಂಗರಾಜ ಹಿರೇಗೌಡ, ಪ್ರದಸ ಪ್ರೇಮಾ‌ ಸುರಪುರ, ದ್ವಿದಸ ರಾಮಚಂದ್ರ ಚವ್ಹಾಣ, ಅತಿಥಿ ಉಪನ್ಯಾಸಕ ವೀರೇಶ ಗೋಗಿ ಸಾಹುಕಾರ, ಸೇವಕರಾದ ಭಾಗಣ್ಣ ಹರನೂರ, ಮಹಾಂತೇಶ ನಾಯಕೋಡಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *