ಕುಡುಕ ಗಂಡನ ಬಿಟ್ಟು ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊಂದ ಪೋಷಕರು

ಜಿಲ್ಲೆ

ಸುದ್ದಿ ಸಂಗ್ರಹ ಚಿಕ್ಕೋಡಿ
ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿಸಿದವನ ಜೊತೆ ಓಡಿ ಹೋಗಿದ್ದ ಮಹಿಳೆಯನ್ನು ಪೋಷಕರು ಕರೆತಂದು ವಿಷ ಕುಡಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷಿ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿದ್ದಾರೆ.

ಕೊಲೆಯಾದ ಮಹಿಳೆಯನ್ನು ಗ್ರಾಮದ ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಈಕೆ ಇದೆ ಗ್ರಾಮದ ಕೃಷ್ಣಾ ಪಾಟೀಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯಲ್ಲಿ ಗೊತ್ತಾಗಿ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೇಳವಿ ಎಂಬಾತನ ಜೊತೆ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿದ್ದರು.

ಮದುವೆಯಾದರೂ ಪ್ರೀತಿಸಿದ ಕೃಷ್ಣಾ ಜೊತೆಗೆ ಸತ್ತೆವ್ವಾ ಸಂಪರ್ಕದಲ್ಲಿದ್ದಳು. ಗಂಡ ಕುಡಿಯುತ್ತಿದ್ದಾನೆ, ತನ್ನನ್ನು ನೋಡಿಕೊಳ್ತಿಲ್ಲ ಎಂದು ಫೆ.17ರಂದು ಗಂಡನ ಮನೆಯಿಂದ ಕೃಷ್ಣಾನ ಜೊತೆಗೆ ಸತ್ತೆವ್ವಾ ಬಂದಿದ್ದಳು. ಬಳಿಕ ಸವದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಂಡಿದ್ದರು. 15 ದಿನಗಳ ಹಿಂದೆ ಇಬ್ಬರನ್ನು ಕುಟುಂಬಸ್ಥರು ಕರೆದುಕೊಂಡು ಬಂದಿದ್ದರು.

ಬಳಿಕ ಸತ್ತೆವ್ವಾಳನ್ನ ಆಕೆಯ ಅಣ್ಣ ಕರೆದುಕೊಂಡು ಬಂದು ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಿದ್ದ. ಅಲ್ಲಿ ಕೃಷ್ಣಾ ಪಾಟೀಲ್‍ನನ್ನು ಮರೆಯುವಂತೆ ಆಕೆಗೆ ಒತ್ತಡ ಹಾಕಲಾಗುತ್ತಿತ್ತು. ಇದಕ್ಕೆ ಒಪ್ಪದಿದ್ದಾಗ ಶಿರೋಳದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಮಾರ್ಚ್ 21ರಂದು ಮಹಿಳೆಗೆ ವಿಷ ಕುಡಿಸಿ ಕೊಲೆ ಮಾಡಿದ್ದರು. ಬಳಿಕ ಸಾಕ್ಷಿ ನಾಶಕ್ಕಾಗಿ ಆಕೆಯ ಹಾಸಿಗೆ ಬಟ್ಟೆ ಸಮೇತ ಶವ ಸುಟ್ಟು ಹಾಕಿದ್ದರು.

ಸತ್ತೆವ್ವಾ ಸಂಪರ್ಕಕ್ಕೆ ಸಿಗದಿದ್ದಾಗ ಸಂಶಯಗೊಂಡಿದ್ದ ಪ್ರಿಯಕರ ಕೃಷ್ಣಾ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ದೂರಿನನ್ವಯ ತನಿಖೆ ಕೈಗೊಂಡಿದ್ದ ಸಿಪಿಐ ಜಾವೇದ್ ಮುಶಾಪುರಿ, ಮಹಿಳೆಯ ಅಣ್ಣ ಶಾನೂರನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಪ್ರಕರಣ ಸಂಬಂಧ ಆರೋಪಿಗಳಾದ ಶಾನೂರ, ಪ್ರಕಾಶ್ ಮತ್ತು ಕಲ್ಲಪ್ಪ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *