ಕಲಬುರಗಿ: ಪರಿಸರ ಸಮತೋಲನಕ್ಕೆ ಶೇ.33ರಷ್ಟು ಅರಣ್ಯ ಪ್ರದೇಶ ಅವಶ್ಯಕತೆಯಿದೆ, ಇದರ ಪ್ರಮಾಣ ಕಡಿಮೆ ಇರುವುದರಿಂದ ಪರಿಸರ ಅಸಮತೋಲನವಾಗುತ್ತಿದೆ. ಆದ್ದರಿಂದ ಎಲ್ಲರು ಗಿಡಗಳನ್ನು ನೆಟ್ಟು, ಅವುಗಳನ್ನು ಮಗುವಿನಂತೆ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಕಾರ್ಯ ಸಾಮೂಹಿಕವಾಗಿ ಮಾಡೋಣ ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ಆಳಂದ ತಾಲೂಕಿನ ಕಡಗಂಚಿಯ ನರ್ಸರಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ‘ವಿಶ್ವ ಪರಿಸರ ದಿನಾಚರಣೆ’ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಹಸಿರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಮತೋಲನವಾಗಿಯೆ ಹುಟ್ಟಿದೆ. ಆದರೆ ಅದರ ಮೇಲೆ ಮಾನವ ದಬ್ಬಾಳಿಕೆ ಮಾಡಿ, ತನಗಿಷ್ಟದಂತೆ ಬದಲಾಯಿಸಬೇಕೆಂಬ ಪ್ರಯತ್ನಕ್ಕೆ ಕೈಹಾಕಿರುವುದರ ಪರಿಣಾಮ ಪರಿಸರದಲ್ಲಿ ಏರು-ಪೇರಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಆದ್ದರಿಂದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಪರಿಸರ ಮೂಲ ಸ್ಥಿತಿಯನ್ನು ಕಾಪಾಡುಬೇಕು. ಎಲ್ಲೆಡೆ ಗಿಡಗಳನ್ನು ನೆಟ್ಟು ಪೋಷಿಸಬೇಕು. ಈ ನರ್ಸರಿಯಲ್ಲಿ ವಿವಿಧ ರೀತಿಯ ಗಿಡಗಳು ದೊರೆಯುತ್ತಿದ್ದು, ಸುತ್ತ-ಮುತ್ತಲಿನ ಜನರು ಅವುಗಳನ್ನು ಪಡೆದು ಬೇರೆ-ಬೇರೆ ಸ್ಥಳಗಳಲ್ಲಿ ನೆಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ನರ್ಸರಿಯ ಕಾವಲುಗಾರ ಗುರುಶಾಂತ ಸಿಂಗೆ, ಸುನೀಲ್ ಹಿರೆಪೂಜಾರಿ, ಪ್ರಮುಖರಾದ ಮಹಾನಂದ ಒಡೆಯರ್, ಪವಿತ್ರಾ, ಅರ್ಚನಾ ಧನ್ನಿ, ಸುವರ್ಣಾ ಡೋಣಿ ಸೇರಿದಂತೆ ಅನೇಕರು ಇದ್ದರು.