ಸುದ್ದಿ ಸಂಗ್ರಹ ಬೆಂಗಳೂರು
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಅಭಾವದ ಚರ್ಚೆ ಮನೆ-ಮನಗಳಲ್ಲಿ ಜೋರಾಗಿದೆ. ಇಂತಹ ಸಮಯದಲ್ಲಿ ‘ನಮ್ಮ ಅಡುಗೆಗೆ ಪರರಾಷ್ಟ್ರಗಳ ಇಂಧನವನ್ನೇಕೆ ಅವಲಂಬಿಸಬೇಕು ? ಎಂಬ ಪ್ರಶ್ನೆಗೆ ಬೆಂಗಳೂರಿನ ‘ಅದಮ್ಯ ಚೇತನ’ ಸಂಸ್ಥೆ ಕಳೆದ 15 ವರ್ಷಗಳಿಂದ ರಚನಾತ್ಮಕ ಉತ್ತರ ಹಾಗೂ ಪರಿಹಾರ- ಎರಡನ್ನೂ ಕಂಡುಕೊಂಡಿದೆ.
ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರು ಆರಂಭಿಸಿದ ಈ ಸಂಸ್ಥೆ, ಇಂದು ವಿಶ್ವದ ಗಮನ ಸೆಳೆಯುತ್ತಿದೆ. 2009ರಿಂದ ಸಂಸ್ಥೆ ಲಕ್ಷಾಂತರ ಮಂದಿಗೆ ಅಡುಗೆ ತಯಾರಿಸುತ್ತಿದ್ದು, ಇದುವರೆಗೆ ಇಲ್ಲಿನ ಅಡುಗೆ ಮನೆಗೆ ಒಂದೆ ಒಂದು ಎಲ್ಪಿಜಿ ಸಿಲಿಂಡರ್ ಪ್ರವೇಶಿಸಿಲ್ಲ. ಬದಲಿಗೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿ ಅಡುಗೆ ತಯಾರಿಸಲಾಗುತ್ತಿದೆ. ತ್ಯಾಜ್ಯದಿಂದ ತಯಾರಿಸಿದ ಬ್ರಿಕೆಟ್ಗಳಿಂದ ಹಬೆ ಆಧಾರಿತ ವ್ಯವಸ್ಥೆಯಡಿ ಬಿಸಿಯೂಟ ರೆಡಿ ಮಾಡಲಾಗುತ್ತಿದೆ.
ಪ್ಲಾಸ್ಟಿಕ್, ಲೋಹ ಮತ್ತು ಕಲ್ಲು-ಮಣ್ಣು ಇಲ್ಲದ ಕೃಷಿ ತ್ಯಾಜ್ಯ, ತುಂಡಾದ ನೋಟ್ಗಳು, ಕೋಟಾ ನೋಟುಗಳನ್ನು ಪುಡಿ ಮಾಡಿ ಬ್ರಿಕೆಟ್ಗಳನ್ನು ತಯಾರಿಸಲಾಗುತ್ತದೆ. ಜೊತೆಗೆ ತೌಡಿನಿಂದ (ಧಾನ್ಯಗಳ ಹೊಟ್ಟು) ತಯಾರಿಸಿದ ಪೆಲೆಟ್ಸ್ಗಳು, ತೆಂಗಿನ ಚಿಪ್ಪುಗಳನ್ನು ಬಳಸಿ ನವೀಕರಿಸಬಹುದಾದ ಇಂಧನ ತಯಾರಿಸಲಾಗುತ್ತಿದೆ.
120 ಸಿಲಿಂಡರ್ಗಳ ಉಳಿತಾಯ
ಅದಮ್ಯ ಚೇತನ ಫೌಂಡೇಷನ್ನ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅನ್ನ-ಅಕ್ಷರ- ಆರೋಗ್ಯ ಎಂಬ ಘೋಷವಾಕ್ಯದೊಂದಿಗೆ ತಮ್ಮ ತಾಯಿ ಗಿರಿಜಾಶಾಸ್ತ್ರಿ ಸ್ಮರಣಾರ್ಥವಾಗಿ 1998ರಲ್ಲಿ ಅನಂತಕುಮಾರ್ ‘ಅದಮ್ಯ ಚೇತನ’ ಆರಂಭಿಸಿದರು. ಪ್ರತಿ ದಿನ ಸುಮಾರು 2 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದೆವೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ 5 ಅಡುಗೆ ಮನೆಗಳಿವೆ. ಪ್ರತಿದಿನ 3 ಟನ್ ಬ್ರಿಕೆಟ್ಗಳನ್ನು ಬಳಸುತ್ತೆವೆ. ಒಟ್ಟಾರೆ 120 ಗ್ಯಾಸ್ ಸಿಲಿಂಡರ್ಗಳಷ್ಟು ನಿತ್ಯ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡಿ ಅಡುಗೆ-ತಿಂಡಿ ಮಾಡಲಾಗುತ್ತದೆ ಎಂದರು.
ಅದಮ್ಯ ಚೇತನ ನಡೆಸುತ್ತಿರುವ ‘ಅನ್ನಪೂರ್ಣ’ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಫಲ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಣೆಬೆನ್ನೂರು, ಜೋಧಪುರ, ಉದಯಪುರಗಳಲ್ಲಿ 1.60 ಲಕ್ಷ ಮಂದಿ ವಿದ್ಯಾರ್ಥಿಗಳು ಮತ್ತು ಬೆಂಗಳೂರು ಸೇರಿದಂತೆ 10 ಸ್ಥಳಗಳಲ್ಲಿ ಸಹಸ್ರಾರು ಮಂದಿಗೆ ಅನ್ನದಾಸೋಹ ನಡೆಯುತ್ತಿದೆ ಎಂದರು.
ಚಪಾತಿ ಬೇಯಿಸಲು ಹೊಗೆ ರಹಿತ ಒಲೆ
ಚಪಾತಿ ಮಾಡಲು ಯಂತ್ರ ಹೊಂದಿದ್ದು, ಚಪಾತಿ ಒತ್ತಲು ಸೋಲಾರ್ ಪವರ್ ಬಳಸಲಾಗುತ್ತಿದೆ. ಬೇಯಿಸಲು ತೆಂಗಿನ ಚಿಪ್ಪುಗಳ ಹೊಗೆ ರಹಿತ ಒಲೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಕ್ಷಾಂತರ ಮಂದಿಗೆ ಅಡುಗೆ ತಯಾರಿಸಿದರೂ ಯಾವುದೆ ತ್ಯಾಜ್ಯ ಈವರೆಗೆ ಹೊರಗೆ ಹಾಕಿಲ್ಲ. ಶೂನ್ಯ ತ್ಯಾಜ್ಯದ ಕಿಚನ್ನಲ್ಲಿ ಅಚ್ಚುಕಟ್ಟಾಗಿ ಅಡುಗೆ ತಯಾರಾಗುತ್ತಿದೆ. ಇದಕ್ಕೆ ಬೇಕಾದ ಪರಿಸರ ಪೂರಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಕುರಿತು ಆಸಕ್ತಿಯುಳ್ಳವರಿಗೆ ತರಬೇತಿ ನೀಡಲಾಗುವುದು. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿದರೂ, ನಂತರ ತುಂಬಾ ಅನುಕೂಲಕರವಾಗಿರುತ್ತದೆ ಎನ್ನುತ್ತಾರೆ ತೇಜಸ್ವಿನಿ ಅನಂತಕುಮಾರ್.
‘ಅಡುಗೆ ಅನಿಲಕ್ಕೆ ಅನ್ಯ ರಾಷ್ಟ್ರಗಳನ್ನು ಅವಲಂಬಿಸುವ ಬದಲು ಆತ್ಮನಿರ್ಭರದಡಿ ಸ್ವದೇಶಿ ಇಂಧನ ಬಳಸೋಣ. ಇದರಿಂದ ರೈತ ಉತ್ಪನ್ನಗಳಿಗೂ ಅನುಕೂಲವಾಗಲಿದೆ. ಹೋಟೆಲ್ಗಳು, ಪಿಜಿಗಳು, ಮನೆಗಳಲ್ಲಿ ಕೂಡ ನವೀಕರಿಸಬಹುದಾದ ಇಂಧನ ತಯಾರಿಸಿಕೊಳ್ಳಬಹುದು” ಎಂದರು.
ಇಸ್ಕಾನ್ ಅಕ್ಷಯ ಪಾತ್ರದಲ್ಲೂ ಇಂಧನ ಕ್ರಾಂತಿ, ಹಬೆ ಮ್ಯಾಜಿಕ್
ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್ನಲ್ಲಿ ಕಳೆದ 25 ವರ್ಷಗಳಿಂದ ಕೃಷಿ ತ್ಯಾಜ್ಯದ ಬ್ರಿಕೆಟ್ಗಳಿಂದ ಹಬೆ ಆಧಾರಿತ (ಸ್ಟೀಮ್ ಆಧಾರಿತ) ವಿಧಾನದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಅಡುಗೆ ತಯಾರಾಗುತ್ತದೆ. ಮಧು ಪಂಡಿತ ದಾಸರು ಬಹಳ ಹಿಂದೆಯೇ ಇದರ ಬಗ್ಗೆ ಆಲೋಚನೆ ಮಾಡಿ, ಬ್ರಿಕೆಟ್ ಬಳಸಿ ಸ್ಟೀಮ್ ಬೇಸ್ಡ್ ಅಡುಗೆ ತಯಾರಿಗೆ ವ್ಯವಸ್ಥೆ ಮಾಡಿದ್ದರು. ಬೆಂಗಳೂರು ಇಸ್ಕಾನ್ನಲ್ಲಿ 6 ಅಡುಗೆ ಮನೆಗಳಿದ್ದು, ಒಂದು ಅಡುಗೆ ಮನೆಗೆ ಮಾತ್ರ ಗೇಲ್ ಪೈಪ್ಲೈನ್ ಮೂಲಕ ಸಂಪರ್ಕ ಪಡೆಯಲಾಗಿದೆ. ”ನಿತ್ಯ ಇಲ್ಲಿಂದ ಸುಮಾರು 3 ಲಕ್ಷ ಜನರಿಗೆ ಅಡುಗೆ ತಯಾರಾಗುತ್ತದೆ” ಎಂದು ಇಸ್ಕಾನ್ನ ಬೆಂಗಳೂರು ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ನವೀನ ನೀರದ ದಾಸ ತಿಳಿಸಿದರು.