ಭೋಪಾಲ್: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ರಕ್ತದಾನ ಪಡೆದ 6 ಮಕ್ಕಳಿಗೆ ಹೆಚ್ಐವಿ ಸೋಂಕು ತಗುಲಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಭಾರಿ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮೂವರು ಆರೋಗ್ಯ ಸಿಬ್ಬಂದಿಯನ್ನ ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದೆ.
ಥಲಸ್ಸೆಮಿಯಾದಿಂದ ಬಳಲುತ್ತಿದ್ದ 15 ವರ್ಷದೊಳಗಿನ 6 ಮಕ್ಕಳಿಗೆ ರಕ್ತ ಕೊಡುವಾಗ ವೈದ್ಯರು ಯಡವಟ್ಟು ಮಾಡಿದ್ದಾರೆ. ಬಾಧಿತ ಮಕ್ಕಳಿಗಾಗಿ 3 ಬ್ಯಾಂಕ್ಗಳಿಂದ 189 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಈ ರಕ್ತವನ್ನು 150ಕ್ಕೂ ಹೆಚ್ಚು ದಾನಿಗಳಿಂದ ಪಡೆಯಲಾಗಿತ್ತು. ಆದರೆ ರಕ್ತ ಪರೀಕ್ಷೆ ಸಂದರ್ಭದಲ್ಲಿ ಉಂಟಾದ ವೈಫಲ್ಯದಿಂದ ಐವರು ಮಕ್ಕಳಿಗೆ ಸೋಂಕು ತಗುಲಿದೆ. ದಾನ ಪಡೆದ ರಕ್ತವನ್ನು ಮಕ್ಕಳಿಗೆ ನೀಡಿದ ಬಳಿಕ ಸೋಂಕು ತಗುಲಿದೆ. ಇದು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಕಂಡ ಅತಿದೊಡ್ಡ ಆರೋಗ್ಯ ವೈಫಲ್ಯವಾಗಿದೆ.
ಘಟನೆ ಸಂಬಂಧ ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಸೋಂಕಿತರ ರಕ್ತವನ್ನು ಮಕ್ಕಳಿಗೆ ನೀಡಲಾಗಿದೆ ಎಂಬ ಪ್ರಕರಣದ ತನಿಖೆಗೆ ರಚಿಸಲಾಗಿರುವ ಸಮಿತಿ ಪ್ರಾಥಮಿಕ ವರದಿಯ ಆಧಾರದಲ್ಲಿ ಗುರುವಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಗೆ ಹೆಚ್ಐವಿ ಸೋಂಕು ತಗುಲಿರುವ ಪ್ರಕರಣ ತನಿಖೆ ಸಲುವಾಗಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡಿಸೆಂಬರ್ 16ರಂದು ಸಮಿತಿ ರಚಿಸಿತ್ತು. ವರದಿಯ ಬೆನ್ನಲ್ಲೆ ರಕ್ತ ಬ್ಯಾಂಕ್ನ ಉಸ್ತುವಾರಿ ಡಾ.ದೇವೇಂದ್ರ ಪಟೇಳ್, ಪ್ರಯೋಗಾಲಯದ ತಂತ್ರಜ್ಞ ರಾಮ್ ಭಾಯ್ ತ್ರಿಪಾಠಿ ಮತ್ತು ನಂದಲಾಲ್ ಪಾಂಡೆ ಎಂಬವರನ್ನು ಅಮಾನತು ಮಾಡಿದೆ. ಹಾಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸಿವಿಲ್ ಸರ್ಜನ್ ಆಗಿದ್ದ ಮನೋಜ್ ಶುಕ್ಲಾ ಅವರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ, ಲಿಖಿತ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಪ್ರತಿಕ್ರಿಯೆ ಸಮಂಜಸವಾಗಿದೆ ಎನಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಹೆಚ್ಐವಿ ಸೋಂಕಿತರ ರಕ್ತದಿಂದಾಗಿ 12 ರಿಂದ 15 ವರ್ಷದೊಳಗಿನ 6 ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಐವಿ ದೃಢಪಟ್ಟಿತ್ತು. ನಂತರ ಒಬ್ಬರು ಫೋಷಕರಲ್ಲು ಸೋಂಕು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಮಂಗಳವಾರ (ಡಿ.16) ತಿಳಿಸಿದ್ದರು.
ಸತ್ನಾ, ಜಬಲ್ಪುರ ಮತ್ತು ಇತರೆಡೆಗಳಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಶಂಕಿತ ರಕ್ತ ವರ್ಗಾವಣೆಯ ನಂತರ 12 ರಿಂದ 15 ವರ್ಷದೊಳಗಿನ ಆರು ಮಕ್ಕಳು ಹೆಚ್ಐವಿ ಪಾಸಿಟಿವ್ ಎಂದು ಮೊದಲು ಕಂಡುಬಂದಿತ್ತು. ಅವರಲ್ಲಿ ಒಬ್ಬರ ಪೋಷಕರು ಸಹ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಮಂಗಳವಾರ (ಡಿ.16) ತಿಳಿಸಿದ್ದಾರೆ. ಮಕ್ಕಳಿಗೆ ಜನವರಿ – ಮೇ ತಿಂಗಳ ನಡುವೆ ಸೋಂಕಿತ ರಕ್ತಪೂರಣವಾಗಿರುವ ಸಾಧ್ಯತೆ ಇದೆ. ಎಲ್ಲ ಮಕ್ಕಳಿಗೆ ಹೆಚ್ಐವಿ ಪ್ರೋಟೊಕಾಲ್ ಅನುಸಾರ ಚಿಕಿತ್ಸೆ ನೀಡಲಾಗುತ್ತಿದೆ.