ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಟ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಪತ್ನಿ ಭಾರತಿ ಮತ್ತು ಅಳಿಯ ಅನಿರುದ್ಧ್, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಸಂಬಂಧ ವಿಷ್ಣು ಅಭಿಮಾನಿಗಳು ಸಹ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಸಿನಿಮಾ ರಂಗಕ್ಕೆ ವಿಷ್ಣು ಅವರ ಕೊಡುಗೆ ಹಾಗೂ ಅಭಿಮಾನಿಗಳ ಒತ್ತಾಸೆಯನ್ನು ಪರಿಗಣಿಸಿ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.
1971 ರಲ್ಲಿ ವಿಷ್ಣುವರ್ಧನ್ ಬೆಳ್ಳಿತೆರೆಗೆ ಪ್ರವೇಶಿಸಿದರು. ವಂಶವೃಕ್ಷ ಅವರ ಮೊದಲ ಚಿತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾ ವಿಷ್ಣುವರ್ಧನ್ ಅವರ ಸಿನಿಮಾ ಬದುಕಿಗೆ ತಿರುವು ನೀಡಿತು. ಭೂತಯ್ಯನ ಮಗ ಅಯ್ಯು, ಗಂಧದ ಗುಡಿ ಸಿನಿಮಾಗಳಲ್ಲೂ ಗಮನ ಸೆಳೆದರು. ನಂತರ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಆಪ್ತರಕ್ಷಕ ವಿಷ್ಣು ಅಭಿನಯದ ಕೊನೆ ಚಿತ್ರ. ಇದು 2010 ರಲ್ಲಿ ತೆರೆ ಕಂಡಿತ್ತು.
ಅಭಿನಯ ಸರಸ್ವತಿ ಎಂದೇ ಜನಪ್ರಿಯತೆ ಗಳಿಸಿದ್ದ ಅಭಿನೇತ್ರಿ ಬಿ.ಸರೋಜಾ ದೇವಿ ಅವರು ಜು.14 ರಂದು ನಿಧನರಾದರು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 1955 ರಲ್ಲಿ ತೆರೆಕಂಡ ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂಬ ಬಿರುದನ್ನೂ ಪಡೆದುಕೊಂಡರು. 1970ರ ದಶಕದ ವರೆಗೂ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು.