ಹಾಸನ: ಕಾರಲ್ಲಿ ಇಬ್ಬರು ಬಾಲಕಿಯರಿದ್ದರು, ಕಾರಲ್ಲಿದ್ದವರು ನನ್ನನ್ನೂ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದರು ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ಅಳುತ್ತ ಓಡಿ ಶಾಲೆಗೆ ಬಂದ ಪ್ರಸಂಗ ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ನಡೆದಿದೆ.
ಶಾಲೆಗೆ ಓಡಿ ಬಂದ ವಿದ್ಯಾರ್ಥಿನಿ, ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಬಂದವರು ಅಪಹರಣಕ್ಕೆ ಯತ್ನಿಸಿದ್ದರು, ಕಾರಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರು ಇದ್ದರು ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ಗಾಬರಿಯಿಂದ ಬಾಲಕಿ ಬ್ಯಾಗ್ ಸಹ ಎಸೆದು ಬಂದಿದ್ದಾಳೆ. ಈ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಕರಣ ಸುಖಾಂತ್ಯ
ಪೊಲೀಸರು ಮಾಹಿತಿ ಕಲೆಹಾಕಿದಾಗ, ಅದೆ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಕಾರಿನಲ್ಲಿ ಪರಿಚಯಸ್ಥ ಯುವಕ ಶಾಲೆಗೆ ಬಿಡಲು ಕರೆದುಕೊಂಡು ಬರುತ್ತಿದ್ದ. ಈ ಬಾಲಕಿಯನ್ನು ಸಹ ಕಾರಿಗೆ ಹತ್ತಿಸಿಕೊಂಡು ಶಾಲೆಯ ಬಳಿ ಬಿಡಲು ಸಮೀಪ ಬಂದು ಕಾರು ನಿಲ್ಲಿಸಿ ಡೋರ್ ತೆಗೆದಿದ್ದಾನೆ. ಅಷ್ಟರಲ್ಲೇ ಬಾಲಕಿ ಕೂಗಾಡಿಕೊಂಡು ಅಲ್ಲಿಂದ ಓಡಿದ್ದಾಳೆ ಎಂದು ತಿಳಿದು ಬಂದಿದೆ. ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ಮಾಹಿತಿ ಪಡೆದುಕೊಂಡು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.