ಎಸ್.ಎಂ ಕೃಷ್ಣ ಅವರಿಗೆ ಮನಸೋತಿದ್ದರೆ ಅಭಿನಯ ಸರಸ್ವತಿ ? ಈ ಪ್ರೇಮ್ ಕಹಾನಿ ಬಗ್ಗೆ ಗೊತ್ತೆ ?

ರಾಜ್ಯ

ಬೆಂಗಳೂರು: ಒಂದು ಕಾಲದಲ್ಲಿ ಚಿತ್ರೋದ್ಯಮದಲ್ಲಿ ಬೆಳೆಯುತ್ತಿದ್ದ ನಟಿ ಸರೋಜಾ ದೇವಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ನಡುವೆ ಪ್ರೀತಿ ಅರಳಿತ್ತು. ರಾಜಕೀಯ ರಂಗಕ್ಕೆ ಆಗಷ್ಟೇ ಎಸ್‌.ಎಂ ಕೃಷ್ಣ ಅವರು ಪಾದಾರ್ಪಣೆ ಮಾಡಿದ್ದರು.

ತಮ್ಮ ಬುದ್ದಿವಂತಿಕೆ, ಶಾಂತ ಚಿತ್ತದ ಆಕರ್ಷಕ ವ್ಯಕ್ತಿತ್ವನ್ನು ಹೊಂದಿದ್ದ ಕೃಷ್ಣ ಅವರು ಕರ್ನಾಟಕದ ಜನತೆಯ ಮನಸ್ಸನ್ನು ಮಾತ್ರವಲ್ಲ ಸರೋಜಾ ದೇವಿಯವರ ಹೃದಯವನ್ನೂ ಗೆದ್ದಿದ್ದರು. ಇವರಿಬ್ಬರ ನಡುವಿನ ಪ್ರೀತಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರ ಜೀವನದ ಬಗ್ಗೆ ಇಂದಿಗೂ ಸಾಕಷ್ಟು ಮಂದಿಯಲ್ಲಿ ಕುತೂಹಲಗಳಿವೆ. ಅವರ ರಾಜಕೀಯ ಸಾಧನೆಯ ಹೊರತಾಗಿ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ನಟಿ ಬಿ.ಸರೋಜಾದೇವಿ ಅವರೊಂದಿಗಿನ ಪ್ರೇಮ ಕಥೆಯೂ ಒಂದು.

ರಾಜಕೀಯ ರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿರುವ ಎಸ್‌.ಎಂ ಕೃಷ್ಣ ಯುವ ನಾಯಕರಾಗಿದ್ದಾಗ ಬಿ.ಸರೋಜಾದೇವಿ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಖ್ಯಾತ ನಟಿಯಾಗಿ ಬೆಳೆದಿದ್ದರು. ಅವರ ಸೌಂದರ್ಯ ಮತ್ತು ಅಭಿನಯ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿತ್ತು.

‘ಹಳ್ಳಿ ಹಕ್ಕಿಯ ಹಾಡು’ ಪುಸ್ತಕದಲ್ಲಿ ಮಾಜಿ ಶಾಸಕ ಎಚ್‌ ವಿಶ್ವನಾಥ ಅವರು ಎಸ್‌.ಎಂ ಕೃಷ್ಣ ಮತ್ತು ಸರೋಜಾದೇವಿ ಅವರ ನಡುವಿನ ಪ್ರೇಮ ಕಥೆಯ ಬಗ್ಗೆ ಹೇಳಿದ್ದಾರೆ. ಇವರಿಬ್ಬರ ಸಂಬಂಧ ಮದುವೆಯ ಪ್ರಸ್ತಾಪದವರೆಗೂ ಮುಂದುವರಿದಿತ್ತು. ಇದು ಸಾಕಷ್ಟು ಮಂದಿಯ ಕುತೂಹಲ ಕೆರಳಿಸಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿತ್ತು. ಈ ಕುರಿತು ಸರೋಜಾದೇವಿ ಎಂದಿಗೂ ನಿರಾಕರಿಸಿಲ್ಲ. ಆದರೆ ಕೆಲವು ವಯಕ್ತಿಕ ಮತ್ತು ಸಾಮಾಜಿಕ ಕಾರಣದಿಂದ ಇವರಿಬ್ಬರ ಪ್ರೇಮ ಕಥೆ ಮುಂದುವರಿಯಲಿಲ್ಲ ಎಂದು ವಿಶ್ವನಾಥ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಬಳಿಕ ಕೃಷ್ಣ ಅವರು ರಾಜಕೀಯ ಜೀವನದ ಮೇಲೆ ಗಮನ ಕೇಂದ್ರೀಕರಿಸಿದ್ದರೆ ಸರೋಜಾದೇವಿ ಅವರು ಚಿತ್ರರಂಗಕ್ಕೆ ಹೆಚ್ಚು ಒತ್ತು ನೀಡಿದರು. ಇವರಿಬ್ಬರ ಪ್ರೀತಿಯ ವಿಚಾರ ಕೆಲವು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಕೃಷ್ಣ ಅವರು ಮಾನನಷ್ಟದ ದಾವೆಯನ್ನೂ ಹೂಡಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *