ಬೆಂಗಳೂರು: ಕೌರವ ವೆಂಕಟೇಶ್ ನಾಯಕನಾಗಿ ನಟಿಸುತ್ತಿರುವ ‘ಒಂದು ಸುಂದರ ದೆವ್ವದ ಕಥೆ’ ಚಿತ್ರ ಸೆಟ್ಟೇರಿದೆ. ಹಿರಿಯ ನಟಿ ಲೀಲಾವತಿ ಅವರ ಸ್ಮಾರಕದ ಮುಂದೆ ಮೊದಲ ದೃಶ್ಯಕ್ಕೆ ನಟ ವಿನೋದ್ ರಾಜ್ ಅವರು ಕ್ಲಾಪ್ ಮಾಡಿದರು. ಎಂ.ಆರ್ ಕಪಿಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ.
35 ವರ್ಷಗಳ ಹಿಂದೆ ನಾನು ಕೌರವ ವೆಂಕಟೇಶ್ ಅವರ ವಿದ್ಯಾರ್ಥಿ ಆಗಿದ್ದೆ. ಈಗ ಅವರ ಸಿನಿಮಾ ನಿರ್ದೇಶಿಸುವ ಅವಕಾಶ ದೊರೆತಿದೆ. ಇದೊಂದು ವಿಭಿನ್ನ ಶೀರ್ಷಿಕೆ, ಸಿನಿಮಾದಲ್ಲೂ ವಿಭಿನ್ನತೆಯಿದೆ. ಶಿಕ್ಷಣ ಕುರಿತು ಒಂದು ಗಟ್ಟಿಯಾದ ಕಥೆಯಿದೆ. ವಿದ್ಯಾರ್ಥಿಗಳಿಗೆ ಓದು ಮುಖ್ಯವೇ ಅಥವಾ ಅಧಿಕಾರಿಗಳಿಗೆ ಲಂಚ ಮುಖ್ಯವೇ ಎಂಬ ಕುರಿತು ಒಂದು ಸಂದೇಶವಿದೆ. ನಾಯಕ ಓರ್ವ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಆತನ ಸುತ್ತಲು ಕಥೆ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗುವುದು ಎಂದರು ನಿರ್ದೇಶಕರು.
ಧರಣಿ ಚಿತ್ರದ ನಾಯಕಿ. ಆರ್ಯ ಫಿಲ್ಮ್ಸ್ ಲಾಂಛನದಲ್ಲಿ ಆರ್.ಲಕ್ಷ್ಮಿ ನಾರಾಯಣಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಪಿಲ್ ನಿರ್ದೇಶನದ ಹತ್ತನೇ ಚಿತ್ರವಿದು.
ಇದುವರೆಗೆ ಸಾಕಷ್ಟು ಚಿತ್ರಗಳಿಗೆ ತಂತ್ರಜ್ಞನಾಗಿ ಕೆಲಸ ಮಾಡಿದ್ದೆನೆ. ಈಗ ನಾಯಕನಾಗುತ್ತಿದ್ದೆನೆ. ವಂಚನೆಗೊಳಗಾದ ಹೆಣ್ಣು ಮಕ್ಕಳಿಗೆ ಹೇಗೆ ನ್ಯಾಯ ಕೊಡಿಸುತ್ತೆನೆ ಎನ್ನುವುದೆ ಮುಖ್ಯ ಕಥೆ ಎಂದರು ಕೌರವ ವೆಂಕಟೇಶ್.
ಸಾಯಿಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ, ಸಂಭಾಷಣೆ, ಹರ್ಷ ಕೊಗೋಡ್ ಸಂಗೀತ, ಶಂಕರ್ ಆರಾಧ್ಯ ಛಾಯಾಗ್ರಹಣ, ವಿನಯ ಜಿ.ಆಲೂರು ಸಂಕಲನ ಚಿತ್ರಕ್ಕಿದೆ. ಸುರೇಶ್ ಮುರಳಿ, ವಿಕ್ಟರಿ ದಯಾಳನ್, ನಾರಾಯಣಸ್ವಾಮಿ, ವಿಕ್ಟರಿ ವಾಸು ಮುಂತಾದವರು ಚಿತ್ರದಲ್ಲಿದ್ದಾರೆ.