ಸರಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿ ವೇತನ ಹೆಚ್ಚಳ: ಹಳೆ ವೈದ್ಯರ ಕಿವಿಗೆ ಹೂವು ಇಟ್ಟ ಸರ್ಕಾರ

ರಾಜ್ಯ

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳ ವೇತನ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ಮೂಲಕ ಮಹತ್ವದ ಘೋಷಣೆ ಮಾಡಿದ ಅವರು, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನ ಪರಿಷ್ಕರಿಸಲಾಗಿದೆ.

ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಈಗಿರುವ ಸಿಬ್ಬಂದಿಗೆ ಇದೆ ವೇತನ ಮುಂದುವರೆಯಲಿದೆ. ಅವರು ಕೂಡ ಹೊಸ ವೇತನಕ್ಕೆ ಅರ್ಹರಾಗಬೇಕಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈಗಾಗಲೆ ಕೆಲಸ ಮಾಡಿದ ವೈದ್ಯರಿಗೆ ಹೊಸ ಹುದ್ದೆ ನೀಡಲಾಗುತ್ತದೆ ಎಂಬ ಭರವಸೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೇತನ ಏರಿಕೆಯ ವಿವರ
ಎಂಬಿಬಿಎಸ್ ವೈದ್ಯರು
ಪ್ರಸ್ತುತ ಸಂಬಳ: ರೂ.46,895 ರಿಂದ ರೂ.50,000
ಪರಿಷ್ಕೃತ ವೇತನ: ರೂ.60,000

ತಜ್ಞ ವೈದ್ಯರು
ಪ್ರಸ್ತುತ ವೇತನ: ರೂ.1,10,000 ರಿಂದ ರೂ.1,30,000
ಪರಿಷ್ಕೃತ ವೇತನ: ರೂ.1,40,000

ಸ್ಟಾಫ್ ನರ್ಸ್‌ಗಳು
ಪ್ರಸ್ತುತ ವೇತನ: ರೂ‌.14,186 ರಿಂದ ರೂ‌.18,774
ಪರಿಷ್ಕೃತ ವೇತನ: ರೂ.22,000

ಖಾಲಿ ಹುದ್ದೆಗಳ ಮಾಹಿತಿ: ರಾಜ್ಯದಲ್ಲಿ ಒಟ್ಟು 9,041 ಹುದ್ದೆಗಳಿವೆ. ಇದರಲ್ಲಿ 1,398 ಎಂಬಿಬಿಎಸ್ ವೈದ್ಯರು, 899 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್‌ಗಳ ಹುದ್ದೆಗಳಿವೆ. ಇದರಲ್ಲಿ ಪ್ರಸ್ತುತವಾಗಿ 579 ಎಂಬಿಬಿಎಸ್ ವೈದ್ಯರು, 305 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.

ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದರೂ, ಅಭ್ಯರ್ಥಿಗಳು ಬರುತ್ತಿಲ್ಲ: ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿಗೆ ವೇತನ ಕಡಿಮೆ ಇರುವ ಕಾರಣದಿಂದ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರು ವೈದ್ಯರು ಹಾಗೂ ನರ್ಸ್‌ಗಳು ಸರಕಾರಿ ಆಸ್ಪತ್ರೆಗೆ ಬಂದು ಕೆಲಸ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣದಿಂದಲೇ ಕೇಂದ್ರ ಸರಕಾರದ ಅನುದಾನದೊಳಗೆ ವೇತನ ಪರಿಷ್ಕರಣೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆವೆ. ಕಳೆದ 8 ತಿಂಗಳಿಂದ ಈ ಕುರಿತು ಮನವಿ ಮಾಡುತ್ತಾ ಬಂದಿದ್ದು, ಇದೀಗ ಕೇಂದ್ರದಿಂದ ಒಪ್ಪಿಗೆ ಲಭಿಸಿದೆ ಎಂದರು.

ಹಳೆಯ ವೈದ್ಯರಿಗೆ ಹೊಸ ವೇತನ ಬೇಕಾದಲ್ಲಿ ರಾಜೀನಾಮೆ ಕೊಡಿ
ಹಳೆಯ ಸಿಬ್ಬಂದಿಗೆ ಹಳೆಯ ವೇತನವೆ ನೀಡಲಾಗುತ್ತದೆ. ಒಂದು ವೇಳೆ ಹಳೆಯ ವೈದ್ಯಕೀಯ ಸಿಬ್ಬಂದಿ ಪರಿಷ್ಕೃತ ವೇತನ ಬೇಕು ಎಂದು ಬಯಸುವುದಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅವರು ಆಯ್ಕೆಯಾದರೆ ಮಾತ್ರ ಹೊಸ ವೇತನ ಪಡೆಯಲು ಅರ್ಹರು. ಇಲ್ಲದಿದ್ದರೆ ಹಿಂದಿನ ವೇತನದಲ್ಲೆ ಮುಂದುವರಿಯಬೇಕು.

  • ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ರಾಜ್ಯದ 30 ಸಾವಿರ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವಿಲ್ಲ:
ರಾಜ್ಯದ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಹಾಯಕ ಸಿಬ್ಬಂದಿ ಸೇರಿ 28,250ಕ್ಕೂ ಅಧಿಕ ಸಿಬ್ಬಂದಿ ಕಾರ್ಯು ನಿರ್ವಹಿಸುತ್ತಿದ್ದಾರೆ. ಆದರೆ ಈ ಎಲ್ಲಾ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನ ಪಾವತಿಸಿಲ್ಲ. ಇದರಿಂದ ಎಲ್ಲಾ ವೈದ್ಯಕೀಯ ಸಿಬ್ಬಂದಿ ವೇತನ ಸಿಗದೆ ಕುಟುಂಬ ನಿರ್ವಹಣೆಗೆ ವೇದನೆ ಅನುಭವಿಸುವಂತಾಗಿದೆ. ಸರಕಾರದ ಸೇವೆ ಸಲ್ಲಿಸಿದ ಸಿಬ್ಬಂದಿ ವೇತನಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *