ಬೆಂಗಳೂರು: ಮನೆ ಆವರಣದಲ್ಲಿ ಬೆಳೆದಿದ್ದ ಗಾಂಜಾ ಗಿಡದಿಂದಾಗಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದ 67 ವರ್ಷದ ವ್ಯಕ್ತಿಗೆ ಹೈಕೋರ್ಟ್ ರಿಲೀಫ್ ನೀಡಿದೆ. 2023ರಲ್ಲಿ ಬೆಂಗಳೂರಿನ ಜಯನಗರದ ಚಂದ್ರಶೇಖರ ಎಂಬುವರ ಮನೆ ಆವರಣದಲ್ಲಿ ಐದು ಗಾಂಜಾ ಗಿಡಗಳು ಬೆಳೆದಿದ್ದವು.
ಈ ಪ್ರಕರಣ ಸಂಬಂಧ ಪೊಲೀಸರು ಚಂದ್ರಶೇಖರ ವಿರುದ್ಧ ಕೇಸ್ ದಾಖಲಿಸಿದ್ದರು. ಆದರೆ ಇದೀಗ ಆ ಪ್ರಕರಣವನ್ನು ಹೈಕೋರ್ಟ್ ಇಂದು (ಮೇ 05) ರದ್ದುಗೊಳಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಹಿರಿಯ ನಾಗರಿಕ ಚಂದ್ರಶೇಖರ ವಿರುದ್ಧದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಚಂದ್ರಶೇಖರ, ತಾನು ಉದ್ದೇಶಪೂರ್ವಕವಾಗಿ ಗಾಂಜಾ ಬೆಳೆದಿಲ್ಲ, ತನ್ನಷ್ಟಕ್ಕೆ ಅದು ಬೆಳೆದಿತ್ತು ಎಂದು ವಾದ ಮಂಡಿಸಿದ್ದರು. ಚಂದ್ರಶೇಖರ ಪರ ವಾದ ಮಂಡಿಸಿದ ವಕೀಲ ಜಯಶ್ಯಾಮ್ ಜಯಸಿಂಹರಾವ್, ಪರಾಗಸ್ಪರ್ಶದಿಂದಲೂ ತನ್ನಿಂತಾನೇ ಐದು ಗಾಂಜಾ ಬೆಳೆದಿವೆ. ಈ ಬಗ್ಗೆ ಮನೆ ಮಾಲೀಕ ಚಂದ್ರಶೇಖರಗೆ ಅರಿವಿಲ್ಲ. ಪೊಲೀಸರು ಹೇಳುವಂತೆ 27 ಕೆಜಿ ಗಾಂಜಾ ಸಿಕ್ಕಿಲ್ಲ, ಗಾಂಜಾ ಗಿಡವನ್ನು ಅದರ ಬೇರು, ರೆಂಬೆ ಕೊಂಬೆ, ಎಲೆ ಸಹಿತವಾಗಿ ತೂಕ ಹಾಕಿರುವುದು ಸರಿಯಲ್ಲ. ಗಾಂಜಾವನ್ನು ಪ್ರತ್ಯೇಕಿಸಿ ತೂಕ ಹಾಕಿಲ್ಲ ಹೀಗಾಗಿ ಒಟ್ಟಾರೆ ಪ್ರಕ್ರಿಯೆಯೆ ಕಾನೂನುಬಾಹಿರವೆಂದು ವಾದಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ 67 ವಯಸ್ಸಿನ ಹಿರಿಯ ನಾಗರಿಕ ಚಂದ್ರಶೇಖರ ವಿರುದ್ಧದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿದೆ. ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿದಾರರಿಗೆ ರಿಲೀಫ್ ನೀಡಿದೆ.