ಚಿತ್ತಾಪುರ: ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದ ದೇವಸ್ಥಾನ ಕಳ್ಳತನ ಮಾಡಿದ ಆರೋಪಿ ಬಂಧಿಸಿ, 1.80 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಬೀರಪ್ಪ ಈರಪ್ಪ ಪೂಜಾರಿಯನ್ನು ಗುರುವಾರ ಬಂಧಿಸಿ ಆತನಿಂದ 1,80,500 ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಹಣ ಜಪ್ತಿ ಮಾಡಿದ್ದಾರೆ.
ನ.31 ರಂದು ಬಹಾರಪೇಠ ತಾಂಡಾ ಮತ್ತು ಡಿ.8 ರಂದು ಅಲೂರು ಗ್ರಾಮದ ಚೌರಮ್ಮ ದೇವಸ್ಥಾನದಲ್ಲಿ ಬಂಗಾರ, ಬೆಳ್ಳಿ ಆಭರಣ ಹಾಗೂ ಹುಂಡಿಯಲ್ಲಿನ ಹಣ ಕಳ್ಳತನವಾಗಿರುವ ಕುರಿತು ದೂರುದಾರರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧಿಕಾರಿಗಳು ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದರು.
ಕಳ್ಳತನ ಪ್ರಕರಣದ ಜಾಡು ಹಿಡಿದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆಯಲ್ಲಿದ್ದಾಗ ಪಟ್ಟಣದಲ್ಲಿ ಗುರುವಾರ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎರಡು ಕಳ್ಳತನ ಪ್ರಕರಣದ ಜೊತೆಗೆ ವಾಡಿ ಠಾಣೆ ವ್ಯಾಪ್ತಿಯ ಬಸವನ ಖಣಿಯ ಸೇವಾಲಾಲ್ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವು ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಅಷ್ಟೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಶ್ರೀಶೈಲ್ ಅಂಬಾಟಿ (ಕಾಸು), ಪಿಎಸ್ಐ ಚಂದ್ರಾಮಪ್ಪ (ತನಿಖೆ), ಸಿಬ್ಬಂದಿಗಳಾದ ಸವಿಕುಮಾರ, ಸಿದ್ದರಾಮೇಶ, ಬಸವರಾಜ, ಈರೇಶ, ಮಂಜುನಾಥ, ರವಿಕುಮಾರ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.