ಸುದ್ದಿ ಸಂಗ್ರಹ ಬೆಂಗಳೂರು
ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ಬಿಗ್ ಬಾಸ್ ಹಲವು ಕಾರಣಗಳಿಂದ ತಮಗೆ ಬಹಳ ವಿಶೇಷ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.
ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಶುರುವಾಗಲಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಚಿತ್ರೀಕರಣ ಮತ್ತು ಬಿಗ್ ಬಾಸ್ ಶೋ ನಡುವಿನ ಸಮಯ ಹೊಂದಾಣಿಕೆಯ ಬಗ್ಗೆ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡರು.
ಹಿಂದಿನ ಸೀಸನ್ಗಳಲ್ಲಿ ವೀಕೆಂಡ್ ಶೂಟಿಂಗ್ ಮ್ಯಾನೇಜ್ ಮಾಡುವುದು ನನಗೆ ದೊಡ್ಡ ಸವಾಲಾಗಿತ್ತು. ಒಮ್ಮೆ ಮಹಾಬಲಿಪುರಂನಲ್ಲಿ ಶೂಟಿಂಗ್ನಲ್ಲಿದ್ದಾಗ ವೀಕೆಂಡ್ನಲ್ಲಿ ಬೆಂಗಳೂರು ಏರ್ಪೋರ್ಟ್ಗೆ ಬಂದು, ಅಲ್ಲಿಂದ ಜೆ.ಪಿ ನಗರಕ್ಕೆ ತಲುಪಿ, ನಂತರ ಬಿಗ್ ಬಾಸ್ ಸೆಟ್ಗೆ ಹೋಗಬೇಕಿತ್ತು. ಆದರೆ ಈ ಬಾರಿ ಆ ತಲೆನೋವಿಲ್ಲ. ನನ್ನ ಬಹುನಿರೀಕ್ಷಿತ ‘ಬಿಲ್ಲ ರಂಗ ಭಾಷಾ’ ಚಿತ್ರದ ಸೆಟ್ ಬಿಗ್ ಬಾಸ್ ಸೆಟ್ನ ಅತ್ಯಂತ ಸಮೀಪದಲ್ಲೇ ಇದೆ. ಕೇವಲ 15 ನಿಮಿಷದಲ್ಲೇ ಶೂಟಿಂಗ್ ಮುಗಿಸಿ ಬಿಗ್ ಬಾಸ್ ವೇದಿಕೆಗೆ ಬಂದುಬಿಡಬಹುದು ಎಂದು ಸುದೀಪ್ ವಿವರಿಸಿದರು.
ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ಅಗ್ನಿಪರೀಕ್ಷೆ’ ಹಾಗೂ ಜಡ್ಜ್ಗಳ ಕಟು ವರ್ತನೆ ಕುರಿತು ಮುಕ್ತವಾಗಿ ಮಾತನಾಡಿದ ಸುದೀಪ್, ಕೆಲವು ಅಗ್ನಿಪರೀಕ್ಷೆಗಳು ಮುಗಿದ ಮೇಲೆಯೇ ನಿಜವಾದ ಯಶಸ್ಸು ಅಥವಾ ಸ್ವರ್ಗ ಸಿಗುವುದು. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದಾಗ ‘ಗೆಟ್ ಔಟ್’ ಎನ್ನುತ್ತಾರೆ; ಆ ಕ್ಷಣಕ್ಕೆ ಅದು ನಮಗೆ ಕಹಿಯೆನಿಸಿದರೂ ಒಳ್ಳೆಯದಕ್ಕೇ ಆಗಿರುತ್ತದೆ. ಇಲ್ಲಿ ಜಡ್ಜ್ಗಳ ನಡವಳಿಕೆ ಎಷ್ಟು ಸರಿ-ತಪ್ಪು ಎಂದು ಚರ್ಚಿಸುವುದು ಮುಖ್ಯವಲ್ಲ. ಅಲ್ಲಿ ರಿಜೆಕ್ಟ್ ಆದವರಿಗೂ ಅದು ದೊಡ್ಡ ಹೈಪ್ ಮತ್ತು ಜನಪ್ರಿಯತೆ ತಂದುಕೊಟ್ಟಿರಬಹುದು. ಒಮ್ಮೆ ತಿರಸ್ಕೃತರಾದ ಮಾತ್ರಕ್ಕೆ ಬದುಕಿನ ಬಾಗಿಲುಗಳು ಮುಚ್ಚುವುದಿಲ್ಲ. ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ಉತ್ತಮ ಮನರಂಜನೆ ನೀಡೋಣ” ಎಂದು ಸ್ಪರ್ಧಿಗಳಿಗೆ ಧೈರ್ಯ ತುಂಬಿದರು.
ಇದೆ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ ಅವರು, ಮುಂದಿನ ಬೇಟೆಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ, ಸರಿಯಾದ ಸಮಯ ಬಂದಾಗ ಎಲ್ಲವನ್ನೂ ಹಂಚಿಕೊಳ್ಳುತ್ತೆನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.