ಸುದ್ದಿ ಸಂಗ್ರಹ ಕಲಬುರಗಿ
ಮಳೆಯ ಕೊರತೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಾನಿಗೀಡಾದ ಬೆಳೆಗಳನ್ನು ಗೃಹ ಹಾಗೂ ಬರ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವೀಕ್ಷಿಸಿ ರೈತರು, ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕಿನ ಅವರಾದ (ಬಿ) ಗ್ರಾಮದ ಹೊರವಲಯದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಚಿವರು ಮಳೆಯಿಲ್ಲದೆ ಮುರುಟಿ ಹೋಗುತ್ತಿದ್ದ ತೊಗರಿ ಮತ್ತು ಸೋಯಾ ಬೆಳೆಗಳನ್ನು ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಅಷ್ಟೆ ಅಲ್ಲದೆ ಎಲ್ ನಿನೊ ಪರಿಣಾಮದಿಂದಾಗಿ ರಾಜ್ಯದಾದ್ಯಂತ ಬರಗಾಲ ಆವರಿಸಿದೆ. ಎನ್ ಡಿಆರ್ ಎಫ್ ನಿಯಮಗಳನ್ನು ಸರಳೀಕರಣ ಮಾಡಿ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೆವೆ. ಕಳೆದ ಬಾರಿಯೂ ಸಕಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದ್ದಕ್ಕೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು ಎಂದರು.
ಎಲ್ಲರಿಗೂ ಏಕರೂಪದ ಪರಿಹಾರ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಬೆಳೆ ಹಾನಿಯ ಪರಿಶೀಲನೆ ನಡೆಸಿ ಅದರ ಆಧಾರದಲ್ಲಿ ರೈತರಿಗೆ ಪರಿಹಾರ ವಿತರಿಸಲಾಗುವುದು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ರೈತರಿಗೆ ಈಗಾಗಲೇ 657 ಕೋಟಿ ಬೆಳೆವಿಮೆ ಬಿಡುಗಡೆಯಾಗಿದೆ. ಹಿಂದಿನ ಸರ್ಕಾರ ಇಷ್ಟು ಪರಿಹಾರ ಕೊಡಿಸಿರಲಿಲ್ಲ’ ಎಂದರು.
ಪ್ರತಿ ತಾಲೂಕಿಗೆ ಕುಡಿಯುವ ನೀರಿಗಾಗಿ 1 ಕೋಟಿ ಮೀಸಲಿಡಲಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ, ಡಿಐಜಿ ಶಾಂತನು ಸಿನ್ಹಾ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಹಸೀಲ್ದಾರ್ ಆನಂದಶೀಲ, ತಾ.ಪಂ. ಮಾನಪ್ಪ ಕಟ್ಟಿಮನಿ ಇತರರು ಇದ್ದರು.