ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಮಹಿಳಾ ಬೆರಳಚ್ಚುಗಾರ್ತಿ ಎಚ್.ಎಸ್ ಕಂಠಿ ಅವರು 300 ರೂ. ಲಂಚ ಪಡೆದು ಬಚಾವಾಗಲು ಯತ್ನಿಸಿ ಹತ್ತು ವರ್ಷಗಳ ನಂತರ ಹೈಕೋರ್ಟ್ನಲ್ಲಿ ಶಾಕ್ ದೊರೆತಿದೆ.
ಸರ್ಕಾರ ವಜಾಗೊಳಿಸಿದ್ದ ಶಿಕ್ಷೆಯನ್ನು ಬದಲಾಯಿಸುವಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ಸಲಹೆ ನೀಡಿತ್ತು. ಆದರೆ ಈಗ ಹೈಕೋರ್ಟ್ ಹೇಳಿದ್ದೆ ಬೇರೆ, ಏನು ಅಂತ ವಿವರ ಇಲ್ಲಿದೆ ನೋಡಿ.
ಮಹಿಳಾ ಬೆರಳಚ್ಚುಗಾರ್ತಿಯೊಬ್ಬರು 300 ರೂ ಲಂಚ ಪಡೆದು ಸಿಕ್ಕಿಬಿದ್ದ ನಂತರ ಅವರನ್ನು ರಾಜ್ಯ ಸರ್ಕಾರ ವಜಾಗೊಳಿಸಿತ್ತು. ಈ ವಿಚಾರವಾಗಿ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ. ಇಂತಹ ಪ್ರಕರಣದಲ್ಲಿ ವಿಧಿಸಿದ ಶಿಕ್ಷೆಯನ್ನು ಬದಲಿಸಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್.ಜಿ ಪಂಡಿತ್ ಮತ್ತು ಸಿ.ಎಂ ಪೂಣಚ್ಚ ಅವರನ್ನೊಳಗೊಂಡ ವಿಭಾಗಿಯ ಪೀಠ ಹೇಳಿದೆ.
ಲಂಚ ಪಡೆದಿದ್ದ ಎಚ್.ಎಸ್ ಕಂಠಿ ಅವರನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ ಶಿಕ್ಷೆಯನ್ನು ಕಡ್ಡಾಯ ನಿವೃತ್ತಿಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಸ್ಎಟಿ) 2018ರ ಜನವರಿ 4 ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಂಠಿ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿ ಸಂಪತರಾವ ಎಸ್ ಬೊಮ್ಮಣ್ಣನವರ್ ಲಂಚ ಪಡೆದ ಆರೋಪ ಎದುರಿಸಿದ್ದರು. ರಾವ್ ಅವರು ದೂರುದಾರ ಗಣೇಶ ಶೆಟ್ಟಿಯಿಂದ 2,000 ಮತ್ತು ಕಂಠಿ 300 ರೂ. ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ವಿಚಾರಣೆಯ ನಂತರ ಕಂಠಿ ಅವರನ್ನು 2014 ಜುಲೈ 24 ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು. ಅವರು ಕರ್ತವ್ಯ ನಿಷ್ಠೆಯನ್ನು ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿರುವದು ಸ್ಪಷ್ಟವಾಗಿದೆ ಎಂದು ಸರ್ಕಾರ ಹೇಳಿತ್ತು.
ಇದನ್ನು ಪ್ರಶ್ನಿಸಿ ಕಂಠಿ ಅವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಆಕೆ 11 ವರ್ಷ 5 ತಿಂಗಳಷ್ಟೆ ಸೇವೆ ಸಲ್ಲಿಸಿದ ಮಹಿಳೆಯಾಗಿದ್ದು, ಪ್ರಕರಣವನ್ನು ಸೌಮ್ಯವಾಗಿ ಪರಿಗಣಿಸಬೇಕು. ವಜಾಗೊಳಿಸುವ ಆದೇಶಕ್ಕೆ ಬದಲಾಗಿ ಕಡ್ಡಾಯ ನಿವೃತ್ತಿ ನೀಡಬಹುದು ಎಂದಿತ್ತು.
ನ್ಯಾಯಮಂಡಳಿಯ ಆದೇಶದ ವಿರುದ್ಧ ರಾಜ್ಯ ಸರ್ಕಾರವು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅಕ್ರಮ ಸಾಬೀತಾದ ಪ್ರಕರಣದಲ್ಲಿ ಶಿಕ್ಷೆಯನ್ನು ಬದಲಿಸುವಂತೆ ನ್ಯಾಯಾಧಿಕರಣ ಸೂಚಿಸಿದೆ. ಇದು ಸರಿಯಲ್ಲ ಎಂದು ಸರ್ಕಾರ ವಾದಿಸಿತ್ತು
ಹೈಕೋರ್ಟ್ ಹೇಳಿದ್ದು ಹೀಗೆ
ಕಂಠಿ ಮೊದಲ ವಿಚಾರಣೆಯಲ್ಲೇ ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿಯೂ ಅದನ್ನು ದಾಖಲಿಸಿದ್ದಾರೆ ಎಂಬುದನ್ನು ಹೈಕೋರ್ಟ್ ವಿಭಾಗಿಯ ಪೀಠ ಗಮನಿಸಿದೆ.
ಲಂಚ ಕೇಳುವದು ಮತ್ತು ಪಡೆಯುವದು ಗಂಭೀರ ಅಪರಾಧವಾಗಿದೆ. ಇಂಥ ಪ್ರಕರಣಗಳಲ್ಲಿ ಕಠಿಣವಾಗಿ ವ್ಯವಹರಿಸಬೇಕು. ಶಿಕ್ಷೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ.