ಸುದ್ದಿ ಸಂಗ್ರಹ ರಾಮನಗರ
ತಹಸೀಲ್ದಾರ್ ಅವರಿಗೆ ಸರ್ಕಾರಿ ನಿವಾಸದಲ್ಲೇ ಅಸಹಜ ಲೈಂಗಿಕ ಕಿರುಕುಳ ನೀಡಿ, ವಿವಸ್ತ್ರಗೊಳಿಸಿ ವಿಡಿಯೋ ಮಾಡಿ 10 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆ ಚನ್ನಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ತಹಸೀಲ್ದಾರ್ ಬಿ.ಎನ್ ಗಿರೀಶ್ ಅವರಿಗೆ ಕಿರುಕುಳ ನೀಡಿದ್ದು, ಆರೋಪಿಯನ್ನು ಮೈಸೂರು ಮೂಲದ ಅನುಶ್ ಎಂದು ಗುರುತಿಸಲಾಗಿದೆ.
ಆರೋಪಿ ಅನುಶ್ ಫೇಸ್ಬುಕ್ ಮೂಲಕ ತಹಸೀಲ್ದಾರ್ ಗಿರೀಶ್ಗೆ ಪರಿಚಯವಾಗಿದ್ದ. ಜೂನ್ 28ರಂದು ರಾತ್ರಿ ಅನುಶ್ ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆಗೆ ಚನ್ನಪಟ್ಟಣದಲ್ಲಿರುವ ತಹಸೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದಿದ್ದ. ಈ ವೇಳೆ ತಹಸೀಲ್ದಾರ್ ಅವರಿಗೆ ಜ್ಯೂಸ್ನಲ್ಲಿ ಮಾತ್ರೆ ಹಾಕಿ, ಪ್ರಜ್ಞೆ ತಪ್ಪಿಸಿ ಚಿನ್ನದ ಉಂಗುರ ಹಾಗೂ ಚೈನ್ ಕಸಿದುಕೊಂಡಿದ್ದಾರೆ. ಅಷ್ಟೆ ಅಲ್ಲದೆ, 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡಲು ನಿರಾಕರಿಸಿದಾಗ ಕೊಲೆಗೆ ಯತ್ನಿಸಿದ್ದಾರೆ. ಬಳಿಕ ವಿವಸ್ತ್ರಗೊಳಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಇದನ್ನು ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬ್ಲಾಕ್ಮೇಲ್ ಮಾಡಿದ್ದಾರೆ. ಈ ಸಂಬಂಧ ಗಿರೀಶ್ ಅವರು ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಎ1 ಅನುಶ್ನನ್ನು ಬಂಧಿಸಿರೋದಾಗಿ ಬೆಂಗಳೂರು ದಕ್ಷಿಣ ವಿಭಾಗದ ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.