ಸುದ್ದಿ ಸಂಗ್ರಹ ವಾಡಿ
ಚಾಲಕನ ನಿಯಂತ್ರಣ ತಪ್ಪಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (KKRTC)ಯ ಬಸ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ಸೋಮವಾರ ಹಲಕರ್ಟಿ ಸಮೀಪ ಸಂಭವಿಸಿದೆ.
ಕಲಬುರ್ಗಿಯಿಂದ ವಾಡಿ ಮಾರ್ಗವಾಗಿ ನಾಲವಾರ ಗ್ರಾಮಕ್ಕೆ ಹೊರಟಿದ್ದ KKRTC ಬಸ್ ಅಪಘಾತಕ್ಕಿಡಾಗಿದೆ. ಬಲರಾಮ ಚೌಕ್ ಮಾರ್ಗದ ಫ್ಲೈಓವರ್ ಹತ್ತಿರದ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ, ಪಕ್ಕದ ನಾಲೆಗೆ ಜಾರಿದೆ. ಬಸ್ಸಿನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.
ಬಸ್ಸಿನ ಚಾಲಕ ಮತ್ತು ನಿರ್ವಾಹಕ ಜವಾಬ್ದಾರಿಯುತವಾಗಿ ವರ್ತಿಸಿ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ. ಬಳಿಕ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ತುರ್ತು ಮಾಹಿತಿ ನೀಡಿ, ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರನ್ನು ಅವರವರ ಗ್ರಾಮಗಳಿಗೆ ತಲುಪಿಸಿದ್ದಾರೆ.
ಬಲರಾಮ ಚೌಕ್ ಮಾರ್ಗದ ಫ್ಲೈಓವರ್ ಹತ್ತಿರದ ತಿರುವು ಅಪಾಯಕಾರಿ ಮತ್ತು ಅವೈಜ್ಞಾನಿಕವಾಗಿದೆ, ಪದೆ ಪದೆ ಅಪಘಾತ ಸಂಭವಿಸುತ್ತಿವೆ. ಈ ಬಾರಿ ದೊಡ್ಡ ಅನಾಹುತ ತಪ್ಪಿದೆ, ಭವಿಷ್ಯದಲ್ಲಿ ಭೀಕರ ದುರಂತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ನಡೆಸಿ ರಸ್ತೆ ತಿರುವನ್ನು ವೈಜ್ಞಾನಿಕವಾಗಿ ಮರುನಿರ್ಮಾಣ ಮಾಡಬೇಕು ಎಂದು ಬಿಜೆಪಿ ವಾಡಿ ಅಧ್ಯಕ್ಷ ವೀರಣ್ಣ ಯಾರಿ ಆಗ್ರಹಿಸಿದ್ದಾರೆ.