ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯ ಸರ್ಕಾರ 2020 ಹಾಗೂ 2021ನೇ ಸಾಲಿನ ಡಾ.ರಾಜ್ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರಕಟ ಮಾಡಿದೆ. 2020ನೇ ಸಾಲಿನ ಡಾ.ರಾಜ್ಕುಮಾರ್ ಪ್ರಶಸ್ತಿ ಹಿರಿಯ ನಟಿ ಡಾ.ಜಯಮಾಲಾ ಅವರಿಗೆ ನೀಡಲಾಗಿದೆ, ಇನ್ನು 2021ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ ಗೋವಿಂದ್ ಅವರಿಗೆ ಘೋಷಿಸಿಸಲಾಗಿದೆ.
ಇನ್ನು 2020ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಿರಿಯ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಎಂಎಸ್ ಸತ್ಯ ಅವರಿಗೆ ಘೋಷಿಸಲಾಗಿದ್ದರೆ, 2021ನೇ ಸಾಲಿನ ಪ್ರಶಸ್ತಿಯನ್ನು ನಿರ್ದೇಶಕ ಶಿವರುದ್ರಯ್ಯ ಅವರಿಗೆ ನೀಡಲಾಗಿದೆ.
ಸುಂದರ್ರಾಜ್ ಅವರಿಗೆ ಗೌರವ
ಜೀವಮಾನದ ಸಾಧನೆಗಾಗಿ ಸರ್ಕಾರ ನೀಡುವ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು 2020ನೇ ಸಾಲಿನಲ್ಲಿ ಪ್ರಗತಿ ಅಶ್ವಥ್ ನಾರಾಯಣ್ ಅವರಿಗೆ ನೀಡಲಾಗಿದ್ದರೆ, 2021ನೇ ಸಾಲಿನ ಪ್ರಶಸ್ತಿನ್ನು ಹಿರಿಯ ನಟ ಎಂ.ಕೆ ಸುಂದರ್ ರಾಜ್ ಅವರಿಗೆ ನೀಡಲಾಗಿದೆ. ಡಾ. ರಾಜಕುಮಾರ್ ಪ್ರಶಸ್ತಿ, ಡಾ. ವಿಷ್ಣುವರ್ದನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಿಗೆ ತಲಾ 5 ಲಕ್ಷ ರೂ. ನಗದು ಹಾಗೂ 50 ಗ್ರಾಂ. ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2020 ಹಾಗೂ 2021ನೇ ಕ್ಯಾಲೆಂಡರ್ ವರ್ಷಗಳ ಡಾ. ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಆಯ್ಕೆ ಸಲಹಾ ಸಮಿತಿಯು ಸಲ್ಲಿಸಿರುವ ಅಂತಿಮ ವರದಿಯನ್ನು ಅಂಗೀಕರಿಸಿ, ಈ ಕೆಳಕಂಡಂತೆ ಪ್ರಶಸ್ತಿಗಳನ್ನು ಘೋಷಿಸಲು ಸರ್ಕಾರವು ಹರ್ಷಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

