ಚಿತ್ತಾಪುರ: ಬಹಳಷ್ಟು ಸಾಧಕರು, ಪ್ರತಿಭೆಗಳು ಗ್ರಾಮೀಣ ಭಾಗದಿಂದ ಬಂದಿದ್ದಾರೆ, ಅದರಲ್ಲೂ ಬಡತನದಿಂದ ಬಂದಿದ್ದಾರೆ ಎಂದು ದಿಶಾ ಪದವಿಪೂರ್ವ ಕಾಲೇಜಿನ ಚೇರ್ಮನ್ ಶಿವಾನಂದ ಖಜುರ್ಗಿ ಹೇಳಿದರು.
ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣದ ನಾಡಿನಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಆದರೆ ಆತ್ಮವಿಶ್ವಾಸದ ಕೊರತೆಯಿದೆ, ಹಿಂಜರಿಕೆಯಿದೆ, ಕೀಳರಿಮೆಯಿದೆ, ಈ ಮನಸ್ಥಿತಿಯಿಂದ ಹೊರಬಂದರೆ ಖಂಡಿತ ನಮ್ಮ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಎನ್ನುವ ಮಾತಿನoತೆ. ಮಕ್ಕಳು ನಿಶ್ಚಿತ ಗುರಿ ಇಟ್ಟುಕೊಂಡು ಓದಬೇಕು, ಗುರುಗಳು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಮಕ್ಕಳ ಸಾಮಾರ್ಥ್ಯ ಹೊರತರುವ ಪ್ರಯತ್ನ ಮಾಡಬೇಕು ಎಂದರು.
ಮಕ್ಕಳು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಗೂಗಲ್ ಮೊರೆ ಹೋಗುವುದಕ್ಕಿಂತ ಪುಸ್ತಕಗಳ ಮೊರೆ ಹೋಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳ ಅಧ್ಯಯನ ಮಾಡಿ ಜ್ಞಾನದ ಜೊತೆಗೆ ಕ್ರಿಯಾಶೀಲತೆ ಮತ್ತು ಅಧ್ಯಯನಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದರು.

ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಸುರೇಖಾ ಯಾದಗಿರಿ, ಶಿಕ್ಷಣದ ಜೊತೆಗೆ ಮಕ್ಕಳು ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಗುರುಗಳನ್ನು ತಂದೆ ತಾಯಿಯನ್ನು ಗೌರವದಿಂದ ನೋಡಬೇಕು ಎಂದು ಕಿವಿಮಾತು ಹೇಳಿದರು.
ಸಾನಿಧ್ಯವಹಿಸಿದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಹಣವಿದ್ದವರು ಸಮಾಜದಲ್ಲಿ ಸಾಕಷ್ಟು ಜನರಿದ್ದಾರೆ ಆದರೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ರೂಪದಲ್ಲಿ ಹಣ ನೀಡುವವರ ಸಂಖ್ಯೆ ಕಡಿಮೆ, ಅಂತವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಪ್ರತಿಭಾ ಪುರಸ್ಕಾರ
10ನೇ ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ತಾರಾಬಾಯಿ, ಪೂಜಾ, ಶರಣು ಅವರಿಗೆ ಕ್ರಮವಾಗಿ 25 ಸಾವಿರ, 15 ಸಾವಿರ, 10 ಸಾವಿರ ರೂ ನೀಡಿ ಸತ್ಕರಿಸಲಾಯಿತು.
ಅದೆ ರೀತಿ ಪಿಯುಸಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ಹಾಜಿಸಾಬ, ಸೌಂದರ್ಯ, ವಿಜಯಲಕ್ಷ್ಮಿಗೆ ಕ್ರಮವಾಗಿ 15 ಸಾವಿರ ರೂ, 10 ಸಾವಿರ ರೂ, 5000 ರೂ.ಗಳ ಪ್ರೋತ್ಸಾಹ ಧನ ನೀಡಲಾಯಿತು.
ಅದೆ ರೀತಿ 7ನೇ, 8ನೇ ಮತ್ತು 9ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ತಾರಾ ಪಾಟೀಲ ಅವರು ತಲಾ 5 ಸಾವಿರ ರೂ. ನೀಡಿದರು.
ಸಂಸ್ಥೆಯಲ್ಲಿ ಅಧ್ಯಯನ ಮಾಡಿದ 2000ನೇ ಬ್ಯಾಚ್’ನ ಹಿರಿಯ ವಿದ್ಯಾರ್ಥಿಗಳು 10ನೇ ತರಗತಿಯ ಸಾಧಕ ಮಕ್ಕಳಿಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸದಸ್ಯರಾದ ಜಾಕಿರ್ ಹುಸೇನ್, ದಾನಿಗಳಾದ ತಾರಾ ಪಾಟೀಲ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಐ ಬಡಿಗೇರ್, ಮುಖ್ಯಗುರು ವಿದ್ಯಾಧರ ಖಂಡಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಿದ್ದಲಿಂಗ ಬಾಳಿ ನಿರೂಪಿಸಿದರು, ಈರಣ್ಣ ಹಳ್ಳಿ ಪ್ರಾರ್ಥಿಸಿದರು, ಈಶ್ವರಗೌಡ ಪಾಟೀಲ ಸ್ವಾಗತಿಸಿದರು ಮತ್ತು ಭುವನೇಶ್ವರಿ ಎಂ ವಂದಿಸಿದರು.