ಕಂಪ್ಯೂಟರ್ ಜ್ಞಾನದಿಂದ ಉದ್ಯೋಗಾವಕಾಶಗಳು ಹೆಚ್ಚಳ

ಜಿಲ್ಲೆ

ಕಲಬುರಗಿ: ವಿದ್ಯಾರ್ಥಿಗಳು ಯಾವುದೆ ಪದವಿ, ಕೋರ್ಸ್ ಮಾಡುವುದರ ಜೊತೆಗೆ ಕಂಪ್ಯೂಟರ ಶಿಕ್ಷಣ ಪಡೆಯಬೇಕು. ಇದರಿಂದ ಸಾಕಷ್ಟು ಉದ್ಯೋಗಾವಕಾಶ ಲಭ್ಯವಾಗುತ್ತವೆ. ಕಂಪ್ಯೂಟರಯಿಲ್ಲದ ಕ್ಷೇತ್ರ ನಾವಿಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿಕ್ಷಣ ತಜ್ಞ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪೂಟರ ತರಬೇತಿ ಸಂಸ್ಥೆಯಲ್ಲಿ ಜರುಗಿದ ಸಂಸ್ಥೆಯಲ್ಲಿ ತರಬೇತಿ ಪಡೆದು ಕಂಪ್ಯೂಟರ್ ಕೋರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಕಂಪ್ಯೂಟರ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥ ಎಂಬ ಸ್ಥಿತಿಗೆ ಬಂದಿರುವುದು ಕಂಪ್ಯೂಟರ್‌ನ ಮಹತ್ವ ಸಾರುತ್ತದೆ ಎಂದರು.

ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಕೆಲವು ವರ್ಷಗಳ ಹಿಂದೆ ಸೀಮಿತ ಕ್ಷೇತ್ರಗಳಿಗೆ ಮೀಸಲಾಗಿದ್ದ ಕಂಪ್ಯೂಟರ್‌ನ ಬಳಕೆ, ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಿಗೆ ವ್ಯಾಪಿಸಿದೆ. ಕಂಪ್ಯೂಟರ್‌ನ ಬಳಕೆಯಿಂದ ಕೆಲಸದ ವೇಗದ ಹೆಚ್ಚಳ, ಸಮಯದ ಉಳಿತಾಯ, ದಕ್ಷತೆ, ನಿಖರತೆ ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಂಪ್ಯೂಟರ ಶಿಕ್ಷಣ ಪಡೆಯುವುದು ಅವಶ್ಯಕವಾಗಿದೆ ಎಂದರು.

ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ 14 ವರ್ಷಗಳಿಂದ ಗುಣಮಟ್ಟದ ಕಂಪ್ಯೂಟರ ತರಬೇತಿ ನೀಡುತ್ತಿದೆ. ಸಂಸ್ಥೆಯಿಂದ ತರಬೇತಿ ಹೊಂದಿದ ಸಾವಿರಾರು ವಿದ್ಯಾರ್ಥಿಗಳು ರಾಜ್ಯದೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಭವಿಷ್ಯ ಉತ್ತಮವಾಗಿದೆ. ಇದು ನಮಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿಂತಕ ಅಶೋಕ ಕಾಳೆ, ಸಮಾಜ ಸೇವಕ ಓಂಕಾರ ವಠಾರ, ತರಬೇತಿ ಸಂಸ್ಥೆಯ ಶಿಕ್ಷಕಿಯರಾದ ನಿಲೊಫರ್ ಶೇಖ್, ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಪೃತ್ವಿ ಕೋರವಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *