ಜೇವರ್ಗಿ: ಸಮಾಜದಲ್ಲಿನ ಜನರು ಅಹಂ ಅನ್ನು ತೊರೆದು ಪ್ರೀತಿ, ವಿಶ್ವಾಸ, ಭಕ್ತಿಯಿಂದ ಪೂಜೆ ಮತ್ತು ದಾಸೋಹ ಪರಂಪರೆಯನ್ನು ದಿನವಿಡಿ ನಡೆಸಿದರೆ ಬದುಕಿಗೆ ಬೆಲೆ ಬರುತ್ತದೆ. ಮಾಡುವ ಕಾರ್ಯದಲ್ಲಿ ಸ್ವಾರ್ಥ ಮತ್ತು ಅಹಂ ಅನ್ನು ಮುಕ್ತಗೊಳಿಸಿ ನಿಸ್ವಾರ್ಥ ಸೇವೆ ಸಲ್ಲಿಸುವದು ತುಂಬಾ ಮುಖ್ಯ ಎಂದು ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಡಾ. ಸಿದ್ದತೋಟೆಂದ್ರ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಕಟ್ಟಿ ಸಂಗಾವಿ ಭೀಮಾ ಬ್ರಿಜ್ ಪ್ರಭು ಬಸಯ್ಯ ತಾತನವರ ಜಾತ್ರಾ ಮಹೋತ್ಸವದ ಅಂಗವಾಗಿ ನೆರವೇರಿದ ರಥೋತ್ಸವದ ನಂತರ ನಡೆದ ಧರ್ಮ ಸಭೆಯ ಸನ್ನಿಧಾನ ವಹಿಸಿ ನೆರೆದ ಅಪಾರಭಕ್ತರ ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಮಠ, ಮಂದಿರಗಳಲ್ಲಿ ಮತ್ತು ನಮ್ಮ ನಮ್ಮ ಮನೆಗಳಲ್ಲಿ ಪೂಜೆಗೆ ಜೊತೆಗೆ ದಾಸೋಹ ಆಚರಣೆಯಲ್ಲಿ ಮೈಗೂಡಿಸಿಕೊಂಡು ಕಾರ್ಯರೂಪಕ್ಕೆ ತರುವುದು ಬಹುಮುಖ್ಯವಾಗಿದೆ ಎಂದರು.
ಇದಕ್ಕೂ ಪೂರ್ವದಲ್ಲಿ ಪ್ರಭು ಬಸಯ್ಯ ತಾತನವರ ಭವ್ಯ ರಥೋತ್ಸವದಲ್ಲಿ ಸಹಸ್ರ ಸಹಸ್ರ ಭಕ್ತರು ಭಾಗವಹಿಸಿ ಭಕ್ತಿ ಭಾವಗಳಲ್ಲಿ ಜಯ ಘೋಷಗಳನ್ನು ಮೊಳಗಿಸಿದರು.
ಈ ಜಾತ್ರಾ ಮಹೋತ್ಸವ ಸಮಾರಂಭದ ನೇತೃತ್ವವನ್ನು ಹೊನ್ನ ಕಿರಣಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯರು ಮತ್ತು ರೋಜಾ ಹಿರೇಮಠದ ಕೆಂಚ ದೃಶ್ಯವೇಂದ್ರ ಶಿವಾಚಾರ್ಯರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ದೊಡ್ಡಪಗೌಡ ಪಾಟೀಲ್ ನರಿಬೋಳ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಶೋಕ್ ಗೋಗಿ. ಆನಂದಕುಮಾರ ಮಧುರಿ, ವೇ ಬಸಯ್ಯಸ್ವಾಮಿಗಳು, ಮಲ್ಲಯ್ಯ ಸ್ವಾಮಿ ವಡಿಗೇರಿ ಆಧ್ಯಾತ್ಮಿಕ ಪುರಾಣ ಪ್ರವಚನ ನೀಡಿದರು. ಪ್ರಭು ಬಸಯ್ಯಸ್ವಾಮಿಗಳು, ದೇವೇಂದ್ರಪ್ಪ ಗoವರ. ಶಿವರಾಜ್ ನೈಯ್ಕೋಡಿ, ಮಹಾದೇವ ಗoವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
ಇದಕ್ಕೂ ಪೂರ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ನಾಲವಾರ ಶ್ರೀಗಳನ್ನು ಭಕ್ತಾದಿಗಳು ಪೂರ್ಣ ಕುಂಭ ಕಳಸ ಕನ್ನಡಿ ಡೊಳ್ಳು ಹೊಲಿಗೆ ವಾದ್ಯಗಳ ಮೂಲಕ ಭವ್ಯವಾಗಿ ಬರಮಾಡಿಕೊಂಡರು.
.