ಸುದ್ದಿ ಸಂಗ್ರಹ ರಾವೂರ
18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರ ಪಟ್ಟಿಯಲ್ಲಿ ನಮೂನೆ 6 ತುಂಬಿ ನೊಂದಣಿ ಮಾಡಿಸಿಕೊಳ್ಳಬೇಕು. ಸಂವಿಧಾನದ ಈ ಹಕ್ಕನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ಹೇಳಿದರು.
ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣೆ ಸಾಕ್ಷರತಾ ಕ್ಲಬ್ ವತಿಯಿಂದ ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ SIR ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಪ್ರತಿಯೊಂದು ಮತವು ನಿರ್ಣಾಯಕ, ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳಲು ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ಅತ್ಯಗತ್ಯ. ಆ ಹಿನ್ನಲೆಯಲ್ಲಿ ಭಾರತೀಯ ಚುನಾವಣೆ ಆಯೋಗವು ಜಾರಿಗೆ ತಂದಿರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಮುಖವಾಗಿದೆ. ದೇಶದ ಪ್ರತಿಯೊಬ್ಬ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು. SIR ಪ್ರಕ್ರಿಯೆ ಚುನಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ದೇಶ ನನಗೇನು ಕೊಟ್ಟಿದೆ ಎನ್ನುವದಕ್ಕಿಂತ ದೇಶಕ್ಕೆ ನಾವೇನು ಕೊಡುತ್ತಿದ್ದೆವೆ ಎಂಬುವದು ಮುಖ್ಯ,. ಅದೆ ರೀತಿ 18 ವರ್ಷ ತುಂಬಿದವರು ಮತದಾರರು ನೊಂದಣಿ ಮಾಡಿಕೊಂಡು ಮತದಾರರಾಗಬೇಕು. ಈ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂದರು.
SIR ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವೈಷ್ಣವಿ, ಭಾಗ್ಯಶ್ರೀ, ದೇವಮ್ಮ, ಅಂಜಲಿ, ಮಲ್ಲಿಕಾರ್ಜುನ, ನಂದಿನಿ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯ ಮೇಲೆ ಅತಿಥಿಗಳಾಗಿ ತಾಲೂಕ ಗ್ರೇಡ್ -1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವಿoದ್ರ ರೆಡ್ಡಿ ದುಗನೂರ ಮತ್ತು ಗ್ರೇಡ್ -1 ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಣಿಸಿಂಗ್ ಚವ್ಹಾಣ ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರು ವಿದ್ಯಾಧರ ಖಂಡಾಳ ವಹಿಸಿದ್ದರು.
ELC ಸಂಯೋಜಕ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಭುವನೇಶ್ವರಿ ಎಂ ನಿರೂಪಿಸಿ, ವಂದಿಸಿದರು.