ಸುದ್ದಿ ಸಂಗ್ರಹ ರಾಯಚೂರು
ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ 7 ದಿನಗಳ ಕಾಲ ಗುರು ರಾಯರ 355ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದು ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.
ಮಂತ್ರಾಲಯದಲ್ಲಿ ಮಾತನಾಡಿದ ಅವರು, ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ ಎಂದರು.
ಆಗಸ್ಟ್ 29, 30, 31ರಂದು ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನ ರಾತ್ರಿ ವೇಳೆ ತೆಪ್ಪೋತ್ಸವ ನಡೆಯಲಿದೆ. ಆಗಸ್ಟ್ 29ರಂದು ರಾಯರ ಪೂರ್ವಾರಾಧನೆ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುವುದು. ಸಾಯಂಕಾಲ ಸಾಧಕರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಆಗಸ್ಟ್ 30ರಂದು ರಾಯರ ಮಧ್ಯಾರಾಧನೆ ಹಿನ್ನೆಲೆ ಸುವರ್ಣ ರಥೋತ್ಸವ ನಡೆಯುವುದು ಎಂದರು.
ಆಗಸ್ಟ್ 31ರಂದು ರಾಯರ ಉತ್ತರಾಧನೆ ಹಿನ್ನೆಲೆ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದ್ದು, ಈ ವೇಳೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿ ನೆರವೇರಿಸಲಾಗುವುದು. ಇನ್ನೂ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಹಿನ್ನೆಲೆಯಲ್ಲಿ ಪುಣ್ಯ ಸ್ನಾನಕ್ಕೆ ಷವರ್ ವ್ಯವಸ್ಥೆ, ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.
ಭಕ್ತರು, ದಾನಿಗಳ ನೆರವಿನಿಂದ ನಿರ್ಮಾಣವಾದ ಥೀಮ್ ಪಾರ್ಕ್, ಮುಖ್ಯರಸ್ತೆಯ ಕಾರಿಡಾರ್, ಎಸ್ಟಿಪಿಯನ್ನು ಆರಾಧನಾ ಮಹೋತ್ಸವ ಹಿನ್ನೆಲೆ ಲೋಕಾರ್ಪಣೆ ಮಾಡಲಾಗುವುದು ಎಂದು ಸುಬುಧೇಂದ್ರ ತೀರ್ಥ ಸ್ವಾಮಿಗಳು ತಿಳಿಸಿದರು.