ಸುದ್ದಿ ಸಂಗ್ರಹ ವಾಡಿ
ಪಟ್ಟಣದ ರೈಲ್ವೆ ನಿಲ್ದಾಣ ಸಮೀಪದಿಂದ ಹನುಮಾನ ನಗರ, ವಿಜಯ ನಗರ, ಇಂದಿರಾ ನಗರ ಸೇರಿದಂತೆ ನಾಲ್ಕೈದು ಬಡಾವಣೆಗಳಿಗೆ ಸಂಪರ್ಕಿಸುವ ಕಾಲುದಾರಿಯನ್ನು ರೈಲ್ವೆ ಸಿಬ್ಬಂದಿ ತಡೆಮಾಡಿರುವುದಕ್ಕೆ ಬಿಜೆಪಿ, ಮಾದಿಗ ದಂಡೋರ ಹೋರಾಟ ಸಮಿತಿ ಮತ್ತು ಕರವೇ ಸಂಘಟನೆ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ರೈಲ್ವೆ ನಿಲ್ದಾಣದ ಪ್ರಬಂಧಕ ಸಿ.ಎಚ್ ರಾಮಕೃಷ್ಣ ಅವರ ಮುಖಾಂತರ ಮೇಲಾಧಿಕಾರಿಗಳಿಗೆ ಮನವಿ ಪತ್ರ ರವಾನಿಸಿ, ಮಾತನಾಡಿದ ಅವರು, ವಾಡಿ ರೈಲ್ವೆ ನಿಲ್ದಾಣ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವ ಪಟ್ಟಣ ಇದಾಗಿದೆ. ಆದರೆ ನೀವು ನಿರಂತರವಾಗಿ ಜನರಿಗೆ ಈ ರೀತಿ ತೊಂದರೆ ನೀಡುತ್ತಿದ್ದಿರಿ ಎಂದರು.
ಪಟ್ಟಣ ರೈಲ್ವೆ ಹಳಿಗಳಿಂದ ಆವೃತವಾಗಿದ್ದು, ಹಳಿಯ ಮತ್ತೊಂದು ಭಾಗದಲ್ಲಿ ನಾಲ್ಕೈದು ಬಡಾವಣೆಗಳಿದ್ದು ಅಲ್ಲಿ ಸುಮಾರು 15 ರಿಂದ 20 ಸಾವಿರ ಜನರು ವಾಸಿಸುತ್ತಿದ್ದು, ರೈಲು ನಿಲ್ದಾಣ ಪ್ರಾರಂಭದಿಂದಲೂ ಜನರಿಗೆ ಅನುಕೂಲಕರವಾಗಿದ್ದ ಪಾದಚಾರಿ ಮಾರ್ಗವನ್ನು ಇದ್ದಕ್ಕಿದ್ದಂತೆ ಮುಚ್ಚಲಾಗಿದ್ದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯುಂಟಾಗಿದೆ ಎಂದರು.
ಮೇಲ್ಸೇತುವೆ ಮತ್ತು ಕೆಳಸೇತುವೆಗೆ ಸಂಬಂದ ಪಟ್ಟ ಮೇಲಾಧಿಕಾರಿಗಳಿಗೆ ಪದೆ ಪದೆ ಮನವಿ ಪತ್ರ ಸಲ್ಲಿಸಿದ್ದೆವೆ. ಆದರೂ ಇದುವರೆಗೆ ನಿರ್ಮಾಣ ಮಾಡಿಲ್ಲ, ಈಗಿರುವ ಪಾದಚಾರಿ ಮಾರ್ಗ ಸಹ ನಿರ್ಬಂಧಿಸಿದ್ದಿರಿ. ಇದರಿಂದಾಗಿ ಜನರಿಗೆ ತೊಂದರೆಯಾಗಿದೆ. ಇದಕ್ಕೆ ಪರ್ಯಾಯ ಮಾರ್ಗಸೂಚಿಸಿ, ಸಂಚಾರಕ್ಕೆ ತಕ್ಷಣ ಅನುವು ಮಾಡಿಕೊಡಿ, ಇಲ್ಲದಿದ್ದರೆ ಜೂನ್ 8ರಂದು ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೇಲಾಧಿಕಾರಿಗಳಿ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪುರಸಭೆ ಮಾಜಿ ಸದಸ್ಯರಾದ ಕಿಶನ ಜಾಧವ, ಅಂಬದಾಸ ಜಾಧವ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಮುಕ್ಕನಾಳ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾಂಬಳೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಅರ್ಜುನ ಕಟ್ಡಿಮನಿ, ಮುಖಂಡರಾದ ಮಹಾಂತೇಶ ಬಿರಾದಾರ, ಪಂಡಿತ್ ಪವಾರ, ಹಾಜಪ್ಪ ಅರಸಣಗಿ, ಗೋವಿಂದ ಚವ್ಹಾಣ, ರಾಮಾಂಜನೇಯ ದದಾಸರಿ, ದೇವೇಂದ್ರ, ವಿಜಯ ಜಾನ್ ಸೇರಿದಂತೆ ಅನೇಕರು ಇದ್ದರು.