ಸುದ್ದಿ ಸಂಗ್ರಹ ಕೋಲಾರ
ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಜಿಲ್ಲಾ ಡ್ರಗ್ ಕಂಟ್ರೋಲರ್ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆ ಮುಖಂಡ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಅನ್ವಯ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಔಷಧ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ಗ್ರೂಪ್ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳನ್ನು ಕಂಡು ಎಡಿಸಿ ಶ್ಯಾಮಲಾ ಹಾಗೂ ಮತ್ತಿಬ್ಬರು ಎಸ್ಕೇಪ್ ಆಗಿದ್ದರು. ಇವರ ಕಾರನ್ನು ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಅಂತಿಮವಾಗಿ ಮೂವರನ್ನು ಬಂಧಿಸಿದ್ದಾರೆ. ಆದರೆ ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ಪಡೆದಿದ್ದ 35 ಸಾವಿರ ರೂ ಲಂಚದ ಹಣವನ್ನು ಮಾರ್ಗ ಮಧ್ಯದಲ್ಲಿಯೇ ಇವರು ಬಿಸಾಡಿದ್ದಾರೆ. ವಿಚಾರಣೆ ವೇಳೆ ವಿಷಯ ಬೆಳಕಿಗೆ ಬಂದಿದ್ದು, ಹಣಕ್ಕಾಗಿ ತಡರಾತ್ರಿವರೆಗೂ ಲೋಕಾಯುಕ್ತ ಅಧಿಕಾರಿಗಳು ಹುಡುಕಾಡಿರುವ ಪ್ರಸಂಗವೂ ನಡೆದಿದೆ. ಆದರೆ ಎಸೆದ ದುಡ್ಡು ಸಿಗದ ಕಾರಣ, ಹಣ ಸ್ವೀಕರಿಸುವ ವಿಡಿಯೋ ಅಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್, ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38 ಸಾವಿರ ಲಂಚಕ್ಕೆ ಜಿಲ್ಲಾ ಡ್ರಗ್ ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ. ಆದರೆ ಲಂಚವಾಗಿ ಸ್ವೀಕರಿಸಿದ್ದ ಹಣವನ್ನು ಅಧಿಕಾರಿ ಮಾರ್ಗ ಮಧ್ಯೆಯೇ ಬಿಸಾಡಿದ್ದಾರೆ. ಆ ದುಡ್ಡಿಗಾಗಿ ಹುಡುಕಾಟ ನಡೆಸಿದ್ದೆವೆ. ಹೀಗಿದ್ದರೂ ಲಂಚ ಕೇಳಿರುವ ಆಡಿಯೋ ಮತ್ತು ಹಣ ಸ್ವೀಕರಿಸುವ ವಿಡಿಯೋ ನಮ್ಮ ಬಳಿ ಇದೆ, ಅವುಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೆವೆ ಎಂದರು.