ಸುದ್ದಿ ಸಂಗ್ರಹ ಶಹಾಬಾದ
ಹುಬ್ಬಳ್ಳಿ ತಾಲೂಕಿನ ಇನಾಂ ವೀರಪುರದಲ್ಲಿ
ಗರ್ಭಿಣಿ ಯುವತಿಯ ಮರ್ಯಾದೆಗೇಡು ಹತ್ಯೆಯನ್ನು ಖಂಡಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಮಾದಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನೀಲಪ್ರಭಾ ಬಬಲಾದ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಮಾದಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ, ನಂತರ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆ ಆಗಿರುವ ಮಗಳನ್ನು ಹೆತ್ತ ತಂದೆಯೆ ತನ್ನ ಮಗಳನ್ನು ಕೊಚ್ಚಿ ಕೊಲೆಮಾಡಿದ್ದು ಅಮಾನವೀಯ ಕೃತ್ಯ, ಈ ಕ್ರೂರ ಪ್ರಕರಣವುನ್ನು ಮಾದಿಗ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆತ್ತ ಮಗಳು ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದಕ್ಕೆ ಹೆತ್ತ ತಂದೆಯೆ ಗರ್ಭಿಣಿ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತೆಗ್ಗಿಸುವ ಇಂತಹ ಪ್ರಕರಣಗಳು ದಿನಗಳೆದಂತೆ ಹೆಚ್ಚುತ್ತಿವೆ. ರಾಜ್ಯದ ಅನೇಕ ಕಡೆ ಈ ರೀತಿ ಕೊಲೆ, ದಾಳಿಗಳು, ಜಾತಿಯ ಅಹಂಕಾರದಿಂದ ಕೂಡಿವೆ ಎಂದರು.
ಹಿರಿಯ ಮುಖಂಡರಾದ ಡಿ.ಡಿ ಓಣಿ ಮತ್ತು ಶರಣು ಪಗಲಾಪುರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.