ಗುರುಗ್ರಾಮ: ತಂತ್ರಜ್ಞಾನ ಬದಲಾದಂತೆ ಸೈಬರ್ ಅಪರಾಧಿಗಳು ಕೂಡ ಹಣ ವಸೂಲಿಗೆ ಹಲವು ಹೊಸ ಟ್ರಿಕ್ ಅಳವಡಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅನುಮಾನ ಬರದಂತೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ವಾಟ್ಸಾಪ್ನಲ್ಲಿ ಬಂದ ಮದುವೆ ಇನ್ವಿಟೇಷನ್ ಓಪನ್ ಮಾಡಿ ವ್ಯಕ್ತಿಯೊಬ್ಬ 97 ಸಾವಿರ ರೂ. ಕಳೆದುಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಪರಿಚಯ ಇರುವವರಿಂದ ಅಲ್ಲ, ಅಪರಿಚಿತ ದೂರವಾಣಿ ಸಂಖ್ಯೆಯಿಂದ ಮದುವೆ ಆಮಂತ್ರಣ ಬಂದರೆ ಅದನ್ನು ಓಪನ್ ಮಾಡಲೇಬೇಡಿ.
ಅಂತಹ ಲಿಂಕ್ಗಳನ್ನು ಓಪನ್ ಮಾಡಿದರೆ ನಿಮಗೆ ಅರಿವಿಲ್ಲದೆ ಸೈಬರ್ ವಂಚಕರು ನಿಮ್ಮ ಖಾತೆಯಿಂದ ಹಣ ದೋಚುವುದು ಸುಲಭವಾಗುತ್ತದೆ. ಸೈಬರ್ ಕ್ರೈಂ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ಪ್ರಕರಣವು ಹೊಸ ಬೆದರಿಕೆ ಒಡ್ಡುತ್ತಿದೆ. ವಿಷ್ಣು ಗಾರ್ಡನ್ ನಿವಾಸಿ ವಿನೋದಕುಮಾರ್ ಅವರ ಮೊಬೈಲ್ಗೆ ವಾಟ್ಸಾಪ್ನಲ್ಲಿ ಸೆಪ್ಟೆಂಬರ್ 4 ರಂದು ಅಪರಿಚಿತ ದೂರವಾಣಿ ಸಂಖ್ಯೆಯಿಂದ ವಾಟ್ಸಾಪ್ನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಬಂದಿತ್ತು.
ಯಾರ ಮದುವೆ, ಯಾರ ಆಹ್ವಾನ ಎಂದು ನೋಡಲು ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿದ್ದಾರೆ, ಆಗ ಅವರಿಗೆ ತಿಳಿಯದೆ ಅವರ ಫೋನ್ ಹ್ಯಾಕ್ ಆಗಿತ್ತು. ಏನಾಯಿತು ಎಂದು ಅರಿತುಕೊಳ್ಳುವ ಹೊತ್ತಿಗೆ , ಮೂರು ಅನಧಿಕೃತ ವಹಿವಾಟುಗಳು ನಡೆದಿದ್ದವು, ಸೈಬರ್ ಅಪರಾಧಿಗಳು ಅವರ ಬ್ಯಾಂಕ್ ಖಾತೆಯಿಂದ 97 ಸಾವಿರ ರೂ. ತೆಗೆದುಕೊಂಡಿದ್ದರು.
ಈ ಘಟನೆಯ ಬಳಿಕ ಕುಮಾರ್ ಗುರುಗ್ರಾಮ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈಬರ್ ಅಪರಾಧಿಗಳು ಜನರನ್ನು ವಂಚಿಸಲು ನಿರಂತರವಾಗಿ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ, ಸಾರ್ವಜನಿಕರು ಜಾಗರುಕರಾಗಿರಬೇಕು.
ಇದೆ ರೀತಿಯ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು, ಅಪರಿಚಿತ ಮೂಲಗಳಿಂದ ಬರುವ ಲಿಂಕ್ಗಳನ್ನು ಮನವರಿಕೆಯಾಗುವಂತೆ ಕಂಡುಬಂದರು ಅವುಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ.