ವಾಡಿ: ಸೆ.7 ರಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟದ ವೇಳೆ ಬೀದಿ ದೀಪಗಳನ್ನು ಆಫ್ ಮಾಡಿದ್ದು, ಇದು ಪೂರ್ವ ಯೋಜಿತ ಕೃತ್ಯವಾಗಿದೆ. ಇದರಲ್ಲಿ ಭಾಗಿಯಾದ ಸಮಾಜಘಾತುಕರಿಗೆ ಕಠಿಣ ಶಿಕ್ಷಗೆ ಗುರಿಪಡಿಸಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಮತ್ತು ಮೆರವಣಿಗೆಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿ ಬಿಟ್ಟಿವೆ, ಇವುಗಳಿಗೆ ಮಟ್ಟಹಾಕುವುದು ಬಿಟ್ಟು, ಅನ್ಯಾಯದ ವಿರುದ್ಧ ಹೋರಾಡಿದರೆ ಲಾಠಿ ಚಾರ್ಜ್ ಮಾಡುತ್ತಾ ನಮ್ಮ ತಾಳ್ಮೆ ಕೆಣುಕುತ್ತಿದ್ದಾರೆ.
ಇಂತಹ ತಾರತಮ್ಯ ಮನಸ್ಥಿತಿಯ ಸರ್ಕಾರದ ವಿರುದ್ಧ ಜನ ಆಕ್ರೋಶಗೊಳ್ಳುತ್ತಿದ್ದು, ಸರ್ಕಾರ ಇದರ ಗಂಭೀರ ಪರಿಣಾಮ ಎದುರಿಸುವ ಕಾಲ ಸನಿಹವಾದಂತಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಸರ್ಕಾರದ ನಡೆ ಆಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಪರಿಣಾಮದಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.