ಕಲಬುರಗಿ: ಛಾಯಾಗ್ರಾಹಕರು ಅಲ್ಲಿನ ಸ್ಥಿತಿ-ಗತಿಯ ನೈಜ ಚಿತ್ರಣ ನೀಡುವ ಕಾರ್ಯ ನಿರ್ವಹಿಸುವ ಕೊಡುಗೆ ರಾಷ್ಟ್ರದ ಅಭಿವೃದ್ಧಿಗೆ ಅನನ್ಯವಾಗಿದೆ ಎಂದು ಹಿರಿಯ ಛಾಯಾಗ್ರಾಹಕ ಬಸವರಾಜ ವೈ ತೊನಸಳ್ಳಿ ಹೇಳಿದರು.
ನಗರದ ನೆಹರು ಗಂಜ್ನ ಬಸ್ ನಿಲ್ದಾಣ ಸಮೀಪದ ನ್ಯೂ ದೇವಿ ಫೋಟೋ ಸ್ಟುಡಿಯೋದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಐತಿಹಾಸಿಕ 5,500ನೇ ಕಾರ್ಯಕ್ರಮ ಜರುಗಿದ ‘188ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ’ಯಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ವ್ಯಕ್ತಿ ಹಾಗೂ ವರ್ಣಿಸಲಾಗದ ದೃಶ್ಯವನ್ನು ನೈಜವಾಗಿ ಸೆರಹಿಡಿಯುವ ಕಲೆ ಸಾಮಾನ್ಯವಾದುದಲ್ಲ. ಇದರಿಂದ ಆ ಸಂದರ್ಭ ಖುದ್ದಾಗಿ ವೀಕ್ಷಿಸಿದ ಅನುಭವ ಉಂಟಾಗುವಂತೆ ಮಾಡುತ್ತದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಕ್ಯಾಮರಾ ಮಾನವನ ಕಣ್ಣುಗಳಿದ್ದಂತೆ. ಕೆಲವು ಸಲ ನಾವು ನೋಡಿದ್ದು ನೆನಪಿಗೆ ಬರದಿದ್ದರು, ಕ್ಯಾಮಾರಾವು ಶಾಶ್ವತ ದಾಖಲೆ ಒದಗಿಸುತ್ತದೆ. ಪ್ರಸ್ತುತವಾಗಿ ಸ್ಮಾರ್ಟ್ಫೋನ್ ಯುಗದಲ್ಲಿ ಛಾಯಾಗ್ರಾಹಕರು ತೀರ್ವ ಸ್ಪರ್ಧೆಯನ್ನು ಎದುರಿಸಿ ಕಾರ್ಯನಿರ್ವಹಿಸಬೇಕಾಗಿರುವುದು ಒಂದು ಸವಾಲಿನ ಕಾರ್ಯವಾಗಿದೆ. ಛಾಯಾಗ್ರಾಹಕರಿಗೆ ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶರಣು ದೋಶೆಟ್ಟಿ, ಪ್ರಮುಖರಾದ ವಿನೋದ ಹೊಸಳ್ಳಿ, ಶಾಂತಪ್ಪ ಜಮಾದಾರ, ಸುನಿಲ್ ಹೊಸಮನಿ ಸೇರಿದಂತೆ ಅನೇಕರು ಇದ್ದರು.