ಕಲಬುರಗಿ: ವಿದ್ಯಾರ್ಥಿ ದೆಸೆಯಿಂದಲೇ ಕಕ ಭಾಗದ ಕ್ರೀಡಾಪಟುಗಳನ್ನು ಗುರ್ತಿಸಿ, ಅವರಲ್ಲಿ ಆಸಕ್ತಿ ಮೂಡಿಸಿ, ಒಲಿಂಪಿಕ್ಸ್ ಕ್ರೀಡೆಯ ಬಗ್ಗೆ ಮಾರ್ಗದರ್ಶನ, ತರಬೇತಿ ನೀಡಿ ಅದರಲ್ಲಿ ಭಾಗವಹಿಸಿ ಸಾಧನೆ ಮಾಡುವಂತಾಗಲಿ ಎಂದು ಜಗತ್ನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗುರುಲಿಂಗಯ್ಯ ಮಠ ಆಶಯ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಒಲಿಂಪಿಕ್ಸ್’ನಲ್ಲಿ ವಿವಿಧ ರೀತಿಯ ಕ್ರೀಡೆಗಳು ಏರ್ಪಡಿಸಲಾಗುತ್ತದೆ ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಕ್ರೀಡೆಯ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಸಾರಲು ಈ ದಿನಾಚರಣೆ ಆಚರಿಸಲಾಗುತ್ತದೆ. ಕ್ರೀಡೆಯಲ್ಲಿ ದೊಡ್ಡದು-ಸಣ್ಣದು ಎಂಬುವದಿಲ್ಲ. ಯಾವುದೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ, ಅದರ ನೀತಿ-ನಿಯಮಗಳ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು, ಪೂರ್ವಸಿದ್ಧತೆಯೊಂದಿಗೆ ತೊಡಗಬೇಕು. ದೊರೆತ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡುವ ಮೂಲಕ ನಮ್ಮ ಭಾಗದ ಕೀರ್ತಿ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಷಟಲ್ ಬ್ಯಾಟ್ಮಿಂಟನ್ ಸಾಧಕ ಕ್ರೀಡಾಪಟು ರೇಣುಕಾಚಾರ್ಯ ಜಿ.ಮಠ, ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕರಾದ ಆದರ್ಶ ವಡ್ಡನಕೇರಿ, ವಿಶ್ವನಾಥ ನಂದರ್ಗಿ, ಗೌರಿ ಹಿರೇಮಠ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.