ಕಲಬುರಗಿ: ಕನ್ನಡದ ಮೇರು ಲೇಖಕಿ, ಸಾಹಿತಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾ ಸಂಕಲನ ಮತ್ತು ಇದರ ಅನುವಾದಕಿಯರಾದ ದೀಪಾ ಭಾಸ್ತಿ ಅವರಿಗೆ ವಿಶ್ವದ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಸಮಸ್ತ ಕನ್ನಡಿಗರಿಗೆ ದೊರೆತ ಗೌರವವಾಗಿದೆ, ತನ್ಮೂಲಕ ಕನ್ನಡದ ಕಂಪು ವಿಶ್ವ ಮಟ್ಟದಲ್ಲಿ ಪಸರಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಮುಕ್ತ ಕಂಠದಿಂದ ಶ್ಲಾಘಿಸಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ನ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ಬುಕರ್ ಪ್ರಶಸ್ತಿ ಪುರಷ್ಕೃತ ಸಾಹಿತಿ, ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಅಭಿನಂದನೆ ಮತ್ತು ಸಿಹಿ ಹಂಚಿ ಸಂಭ್ರಮಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಚ್ಚು ಜ್ಞಾನಪೀಠ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡ ಸಾಹಿತ್ಯ, ಭಾಷೆ ಜಗತ್ತಿನ ಹಿರಿಯ ಮತ್ತು ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಬಾನು ಮುಷ್ತಾಕ್ ಅವರು ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನು ಮೆಟ್ಟಿ ನಿಂತು, ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವುದು ಸಾಮಾನ್ಯವಲ್ಲ. ಇವರು ಸಮಸ್ತ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ. ಮಹಿಳೆಯರು ಯಾವುದೆ ಕ್ಷೇತ್ರದಲ್ಲಿ ಹಿಂದುಳಿದಿಲ್ಲ ಎಂಬುದಕ್ಕೆ ಬಾನು ಮುಷ್ತಾಕ್, ದೀಪಾ ಭಾಸ್ತಿಯವರ ಅದ್ವಿತೀಯ ಸಾಧನೆಯೇ ಸಾಕ್ಷಿಯಾಗಿದೆ. ಇದು ಕನ್ನಡ ನಾಡು ಮರೆಯಲಾರದ ಅವಿಸ್ಮರಣೀಯ ಸಂಗತಿಯಾಗಿದೆ ಎಂದು ಉಭಯ ಸಾಹಿತಿಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಶಿವಯೋಗೆಪ್ಪಾ ಎಸ್ ಬಿರಾದಾರ, ಸಮಾಜ ಸೇವಕ ಓಂಕಾರ ವಠಾರ, ಶಿಕ್ಷಕಿಯರಾದ ಮುಸ್ಕಾನ್ ಶೇಖ್, ಪೂಜಾ ಹೂಗಾರ, ಪೃತ್ವಿ ಕೋರವಾರ, ನೇಹಾ, ಕಾವೇರಿ ಹೌದೆ, ನಿಲೊಫರ್ ಶೇಖ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.