ವಾಡಿ: ಬೇಸಿಗೆ ಕಾಲದ ಮಳೆಗೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಯ ದ್ವಿಪಥ ಕಂಬಗಳು ಸಣ್ಣ ಮಳೆ- ಬಿರುಗಾಳಿಗೆ ಸಾಲಾಗಿ ನೆಲಕ್ಕುರುಳಿವೆ. ಅದೃಷ್ಟವಶಾತ ಒಬ್ಬ ಮಹಿಳೆ ಸೇರಿದಂತೆ ಕೆಲವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರ ಮತ್ತು ಅನುಷ್ಠಾನಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಿಸಿದ್ದಾರೆ.
ಸುಮಾರು 3-4 ವರ್ಷಗಳಿಂದ ಕುಂಟುತ್ತಾ ಕಳಪೆ ಮಟ್ಟದಿಂದ ಸಾಗುತ್ತಿದ್ದ ಈ ರಸ್ತೆ ಕಾಮಗಾರಿಯಿಂದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಗುಣಮಟ್ಟದ ಡಾಂಬರ ರಸ್ತೆ ಇದ್ದರೂ ಕೂಡಾ ಅದನ್ನು ಒಡೆದು ಈ ರೀತಿ ಕಳಪೆ ರಸ್ತೆ ನಿರ್ಮಾಣ ಮಾಡುವುದನ್ನು ಬಿಡಿ, ಯಾಕೆ ಸಾರ್ವಜನಿಕರ ಸಂಪತ್ತನ್ನು ಕಾಮಗಾರಿ ನೆಪದಲ್ಲಿ ಕೊಳ್ಳೆ ಹೊಡಿತ್ತಿದ್ದಿರಿ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದರು ಪ್ರಯೋಜನವಾಗಿಲ್ಲ. ಕಾಮಗಾರಿ ಪೂರ್ಣಗೊಂಡು ಒಂದು ವರ್ಷವಾಗಿಲ್ಲ, ರಸ್ತೆ ಮೇಲೆ ಜಲ್ಲಿ ಕಲ್ಲುಗಳು ತೇಲಿವೆ. ರಸ್ತೆ ಮಧ್ಯ ಅಸಮರ್ಪಕ ವಿದ್ಯುತ್ ದ್ವೀಪದ ಕಂಬಗಳು ನಿರ್ಮಿಸಿ ತಿಂಗಳು ಕಳೆದಿಲ್ಲ ಅಷ್ಟರಲ್ಲಿಯೇ ಈ ರೀತಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬೀಳುತ್ತಿವೆ. ಇದರಿಂದ ಬಹುತೇಕ ಜನರ ಪ್ರಾಣಗಳ ಜೊತೆಗೆ ಈ ರಸ್ತೆಯ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಅನುಷ್ಠಾನಾಧಿಕಾರಿ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಇದರ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಹಾಗೂ ಕಳೆದ ವಾರ ಪಟ್ಟಣಕ್ಕೆ ಸಾರ್ವಜನಿಕ ಅಹವಾಲು ಸ್ವೀಕರಿಸಲು ಆಗಮಿಸಿದ ಸಂದರ್ಭದಲ್ಲಿ ಖುದ್ದು ಭೇಟಿಯಾಗಿ ಈ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ವಿವರಿಸಿದ್ದೆನೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಈ ಕಳಪೆ ಕಾಮಗಾರಿ ಯಿಂದಾಗುವ ಅನಾಹುತವನ್ನು ತಪ್ಪಿಸಲು ದೌಡಾಯಿಸಬೇಕು ಎಂದರು.
ಸಾರ್ವಜನಿಕ ಸಂಪತ್ತನ್ನು ಹಾಳು ಮಾಡಿ, ಜನರ ಜೀವಕ್ಕೆ ಹಾನಿಯಾಗುವಂತ ಕಾಮಗಾರಿ ನಿರ್ಮಾಣದಲ್ಲಿ ತೊಡಗಿದ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಅನುಷ್ಠಾನಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಮತ್ತೆ ಜಿಲ್ಲಾಧಿಕಾರಿಗಳಿಗೆ ನಾವು ಒತ್ತಾಯಮಾಡುತ್ತೆವೆ. ಇದಕ್ಕೆ ತಕ್ಷಣ ಸ್ಫಂದಿಸದೆ, ಜನಸಾಮಾನ್ಯರ ಜೀವನದ ಜೊತೆಗೆ ಚೆಲ್ಲಾಟಾ ಮುಂದುವರೆಸಿದ್ದೆ ಆದರೆ ಕೆಲವು ದಿನಗಳಲ್ಲಿ ಪಟ್ಟಣದ ಸಾರ್ವಜನಿಕರೊಂದಿಗೆ ಉಗ್ರ ಹೋರಾಟಕ್ಕೆ ಮುಂದಾಗುತ್ತೆವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.