ಹಾವೇರಿ: ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ನರ್ಸ್ ಅನ್ನು ಅಮಾನತುಗೊಳಿಸಲಾಗಿದೆ.
ಸರ್ಕಾರದ ಪ್ರಧಾನಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆವಿಕ್ವಿಕ್ ಅಂಟು ದ್ರಾವಣವಾಗಿದ್ದು, ವೈದ್ಯಕೀಯ ಬಳಕೆಯಲ್ಲಿಲ್ಲ. ಮಗುವಿನ ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿ ಕರ್ತವ್ಯ ಲೋಪವೆಸಗಿದ್ದಾರೆ. ಸ್ಟಾಫ್ ನರ್ಸ್ ಬಗ್ಗೆ ಪ್ರಾಥಮಿಕ ವರದಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಗುವಿನ ಆರೋಗ್ಯದಲ್ಲಿ ಅಡ್ಡಪರಿಣಾಮಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಿದೆ, ಚಿಕಿತ್ಸೆಗೆ ಒಳಪಟ್ಟಿದ್ದ ಮಗು ಆರೋಗ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಪ್ರಕರಣ ಏನು ?
ಹಾವೇರಿ ಜಿಲ್ಲೆಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಲಕನ ಕೆನ್ನೆಯ ಮೇಲೆ ಆಗಿರುವ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್ ಒಬ್ಬರು ಫೆವಿಕ್ವಿಕ್ ಹಾಕಿದ್ದರು.
ಜನವರಿ 14ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟ ಆಡುವಾಗ ಬಿದ್ದು 7 ವರ್ಷದ ಗುರುಕಿಶನ್ ಕೆನ್ನೆಗೆ ಗಾಯವಾಗಿತ್ತು. ಗುರುಕಿಶನ್ನನ್ನು ಚಿಕಿತ್ಸೆಗೆಂದು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಷಕರು ಕರೆದೊಯ್ದಿದ್ದರು. ಕರ್ತವ್ಯದಲ್ಲಿದ್ದ ನರ್ಸ್ ಜ್ಯೋತಿ ಚಿಕಿತ್ಸೆ ನೀಡುವಾಗ ಕೆನ್ನೆಗೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದರು.
ಪೋಷಕರ ಗಮನಕ್ಕೆ ಬಂದ ಮೇಲೆ ಏಕೆ ಹೀಗೆ ಮಾಡಿದ್ದಿರಿ ಎಂದು ದಾದಿಯನ್ನು ಕೇಳಿದಾಗ, ಕೆನ್ನೆಗೆ ಸ್ಟಿಚ್ ಹಾಕಿದರೆ ಕಲೆ ಆಗುತ್ತದೆ. ಅದಕ್ಕೆ ಫೆವಿಕ್ವಿಕ್ ಹಚ್ಚಿದ್ದೆನೆ. ಕಳೆದ ಐದು ವರ್ಷದಿಂದ ಇದನ್ನೇ ಮಾಡುತ್ತಿದ್ದೆನೆ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಕಂಗಾಲಾದ ಪೋಷಕರು, ಆರೋಗ್ಯ ಕೇಂದ್ರದ ರಕ್ಷಣಾ ಸಮಿತಿಗೆ ದೂರು ಕೊಟ್ಟಿದ್ದಾರೆ.