ಸುದ್ದಿ ಸಂಗ್ರಹ ಕಲಬುರಗಿ
ನಗರದ ಕುಸನೂರು ರಸ್ತೆಯ ಅನ್ನಪೂರ್ಣೇಶ್ವರಿ ಕಾಲೊನಿಯಲ್ಲಿ ಮನೆಯ ಬಾಗಿಲಿನ ಕೊಂಡಿ ಮುರಿದ ಕಳ್ಳರು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆಗಿರುವ ಪ್ರಸನ್ನ ಪುರಾಣಿಕ (39) ಚಿನ್ನಾಭರಣ ಕಳೆದುಕೊಂಡವರು. ಅವರು ಅನ್ನಪೂರ್ಣೇಶ್ವರಿ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ನೆಲೆಸಿದ್ದರು.
ತಾಯಿ ಆಗಸ್ಟ್ 7ರಂದು ಭಜನಾ ಮೇಳದೊಂದಿಗೆ ಪ್ರವಾಸಕ್ಕೆ ಹೋಗಿದ್ದರು. ನಾನು ಆಗಸ್ಟ್ 9ರಂದು ಸಂಜೆ ಸೇಡಂನಲ್ಲಿರುವ ತಮ್ಮನ ಭೇಟಿ ಮಾಡಲು ಹೋಗಿದ್ದೆ. ಆಗಸ್ಟ್ 10ರಂದು ರಾತ್ರಿ 8.30ರ ಸುಮಾರಿಗೆ ಬಂದು ನೋಡಿದಾಗ ಕಳುವು ನಡೆದಿರುವುದು ಗೊತ್ತಾಗಿದೆ. ಕಳ್ಳರು ಅಲ್ಮೇರಾದಲ್ಲಿದ್ದ 50 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ನಗದು ಸೇರಿದಂತೆ ಒಟ್ಟು 4.50 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಪ್ರಸನ್ನ ಪುರಾಣಿಕ ತಿಳಿಸಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.