ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಮುಗುಳನಾಗಾವಿ ಬಾಲುನಾಯಕ ತಾಂಡಾದಲ್ಲಿರುವ ಕೆರೆಯಲ್ಲಿ ಮೀನುಗಾರರ ಬಲೆಗೆ ಮೊಸಳೆ ಸಿಕ್ಕಿದೆ.
ಸೋಲಾಪುರ ಮೂಲದ ಮೀನುಗಾರರು ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ ಬಲೆಯಲ್ಲಿ ಬುಧವಾರ ಮಧ್ಯಾಹ್ನ ಮೊಸಳೆ ಸಿಕ್ಕಿದೆ. ಸುಮಾರು 8 ಅಡಿ ಉದ್ದದ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಎರಡು ಗಂಟೆ ಸಾಹಸ ಪಟ್ಟು ಕೊನೆಗೂ ಸಂಜೆ 5 ಗಂಟೆಗೆ ಕೆರೆಯ ದಂಡೆಗೆ ತಂದಿದ್ದಾರೆ.
ಮೊಸಳೆ ಸಿಕ್ಕ ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಅನೀಲಕುಮಾರ ಮತ್ತು ವಿಜಯಕುಮಾರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಮೊಸಳೆಯನ್ನು ಮಾಡಬೂಳ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಿದ್ದಾರೆ.
ಮೊಸಳೆಯನ್ನು ನೋಡಲು ನೂರಾರು ಜನ ತಂಡೋಪತಂಡವಾಗಿ ಬಂದಿದ್ದರು. ಮೊಸಳೆ ಹಲವಾರು ಬಾರಿ ನೀರು ಕುಡಿಯಲು ಹೋದ ಕುರಿಗಳನ್ನು ಬೇಟೆಯಾಡಿದೆ. ಅನೇಕ ಬಾರಿ ಕೆರೆಯ ಸಮೀಪದ ಬಾವಿಯಲ್ಲಿಯೂ ಕಾಣಿಸಿಕೊಂಡಿತ್ತು. ಆದರೆ ಸಿಕ್ಕಿರಲಿಲ್ಲ. ಈ ಕುರಿತು ಹಿಂದೊಮ್ಮೆ ಅರಣ್ಯ ಇಲಾಖೆಗೆ ದೂರು ಸಹ ನೀಡಲಾಗಿತ್ತು ಎಂದು ತಾಂಡಾದ ಜನ ತಿಳಿಸಿದರು.
ಸೋಲಾಪುರದ ಮೀನುಗಾರರಾದ ಕೀಶನ್ ರಾಮು, ಲಾಲು ಬೋವಿ ಹಾಗೂ ತಂಡದವರು ಇದ್ದರು.