ಸುದ್ದಿ ಸಂಗ್ರಹ ಚಿತ್ತಾಪುರ
ಮೇ.27ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುಡುಗು ಸಹಿತ ಭಾರಿ ಗಾಳಿ- ಮಳೆಯ ಅಬ್ಬರದ ನಡುವೆ ಕಣಕಿ ಬಣಮಿಗೆ ಸಿಡಿಲು ಬಡಿದು, ಕಣಕಿ ಬಣಮಿ ಸಂಪುರ್ಣವಾಗಿ ಹೊತ್ತಿ ಉರಿದ ಘಟನೆ ಕರದಾಳ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕರದಾಳ ಗ್ರಾಮದ ಸಿದ್ದಣ್ಣ ಶರಣಪ್ಪ ಕೊಟ್ರಿಕಿ ಎಂಬವರ ಜಮೀನಿನಲ್ಲಿ ಶೇಖರಿಸಿದ್ದ ಕಣಕಿ ಬಣಮಿಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ.
ಮಳೆಯ ನಡುವೆಯೂ ಕಣಕಿ ಬಣಮಿ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಕಣಕಿ ಬಣಮಿಯಿಂದ ಹಾರುತ್ತಿರುವ ಬೆಂಕಿಯ ಕಿಡಿಗಳು ಮಿಂಚು ಹುಳುವಿನಂತೆ ಹೊಳೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್’ನಲ್ಲಿ ಸೆರೆಹಿಡಿದಿದ್ದಾರೆ.
ಹಲವು ದಿನಗಳ ಹಿಂದೆ ಹೊಲದಲ್ಲಿದ್ದ ಜೋಳದ ರಾಶಿ ಮಾಡಿ, ಕಣಕಿ ಬಣಮಿಯನ್ನು ಹೊಲದಲ್ಲಿ ಶೇಖರಿಸಿ ಇಡಲಾಗಿದ್ದು, ಸಿಡಿಲಿನ ಅಪಘಾತಕ್ಕೆ ಹೊತ್ತಿ ಉರಿದಿದೆ. ಘಟನೆಯಿಂದ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.