ಸುದ್ದಿ ಸಂಗ್ರಹ ಶಹಾಬಾದ್
ಶಿವನ ಅಪ್ಪಣೆಯಂತೆ ಅಲ್ಪ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿ ಶಿವನ ಸಾನಿಧ್ಯ ಸೇರಿದ ಬಾಲ
ಮುತ್ತೈದೆ ಶಕುಂತಲಾ ದೇವಿ ಕೇವಲ ಚಿಕ್ಕ ಮಗುವಲ್ಲ, ಅವರು ಜಗದಂಬಾ ದೇವಿಯ ಅವತಾರವೇ ಆಗಿದ್ದಾರೆ ಎಂದು ಕಟ್ಟಿಮನಿ ಸಂಸ್ಥಾನ ಹಿರೇಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ನಗರದ ಬಾಲುನಾಯಕ ತಾಂಡದ ಮಾತಾ ಶಕುಂತಲಾ ದೇವಿಯ ದೇವಸ್ಥಾನ ಹಾಗೂ ಬಸವಣ್ಣ ದೇವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಾತಾ ಶಕುಂತಲಾ ದೇವಿಯ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಬಸವಣ್ಣ ದೇವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವವು ಅತ್ಯಂತ ಸಡಗರದಿಂದ ನೆರವೇರಿತು. ಚಿಕ್ಕ ವಯಸ್ಸಿನಲ್ಲಿಯೇ ಲಿಂಗೈಕ್ಯರಾದ ಶಕುಂತಲಾ ದೇವಿ ಈ ಭಾಗದ ಭಕ್ತರ ಪಾಲಿಗೆ ಶಕ್ತಿಯ ರೂಪವಾಗಿದ್ದಾರೆ. ಅವರ ಸ್ಮರಣಾರ್ಥ ನಿರ್ಮಿಸಲಾದ ಈ ಸುಂದರ ಕಟ್ಟಡವು ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿದೆ ಎಂದು ಬಣ್ಣಿಸಿದರು.
ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಜೇಮಸಿಂಗ ಮಹಾರಾಜರು ಮಾತನಾಡುತ್ತ, ಮಕ್ಕಳು ಹೊರಗಿನವರಿಗಿಂತ ಹೆಚ್ಚಾಗಿ ಮನೆಯಲ್ಲಿನ ಹಿರಿಯರನ್ನು ನೋಡಿ ಕಲಿಯುತ್ತಾರೆ. ತಂದೆ-ತಾಯಿಗಳು ಗುರು ಹಿರಿಯರಿಗೆ ನೀಡುವ ಗೌರವ ನೋಡಿ ಮಕ್ಕಳು ಅದನ್ನು ರೂಢಿಸಿಕೊಳ್ಳುತ್ತಾರೆ ಆದ್ದರಿಂದ ಮನೆಯೇ ಮೊದಲ ಪಾಠ ಶಾಲೆಯಾಗಲಿ, ಆಧುನಿಕತೆಯ ಅಬ್ಬರದಲ್ಲಿ ನಮ್ಮ ಮೂಲ ಸಂಸ್ಕೃತಿ ಮತ್ತು ಆಚಾರ-ವಿಚಾರಗಳು ಮರೆಯಾಗುತ್ತಿವೆ. ಪೂರ್ವಜರು ಹಾಕಿಕೊಟ್ಟ ಉತ್ತಮ ದಾರಿಯಲ್ಲಿ ಮಕ್ಕಳನ್ನು ನಡೆಸುವುದು ಸಂಸ್ಕೃತಿಯನ್ನು ಉಳಿಸುವ ಮೊದಲ ಹೆಜ್ಜೆ. ಕೇವಲ ಶಿಕ್ಷಣವಿದ್ದರೆ ಸಾಲದು, ಅದರೊಂದಿಗೆ ವಿನಯ ಮತ್ತು ಹಿರಿಯರ ಬಗ್ಗೆ ಆದರವಿರಬೇಕು. ಈ ಸಂಸ್ಕಾರವೇ ವ್ಯಕ್ತಿಯ ವ್ಯಕ್ತಿತ್ವ ರೂಪಿಸುತ್ತದೆ ಎಂದರು.
ಅನಿಲ ಸಾಹೇಬ ಮಹಾರಾಜ, ಮುಂಬೈನ ರಾಜು ಪವಾರ ಮಾತನಾಡಿದರು.
ಉದಾರ ದಾನಿಗಳ ಸೇವೆ: ದೇವಸ್ಥಾನದ ಸುಂದರ ಕಟ್ಟಡಕ್ಕೆ ಶೋಭೆ ನೀಡುವ ನಿಟ್ಟಿನಲ್ಲಿ, ಸಮಾಜ ಸೇವಕ ರಾಜು ಪವಾರ ಮುಂಬೈ, ದೆಹಲಿ ಪೊಲೀಸ್ ಅಧಿಕಾರಿ ಮೋಹನ ಚವ್ಹಾಣ್ ಅವರು ತಮ್ಮ ಕಷ್ಟಾರ್ಜಿತ ನೌಕರಿಯ ವೇತನದಿಂದ ಸುಮಾರು 80 ಸಾವಿರದಿಂದ ಒಂದು ಲಕ್ಷ ರೂ ಗಳ ವೆಚ್ಚದಲ್ಲಿ ದೇವಸ್ಥಾನಕ್ಕೆ ಕಬ್ಬಿಣದ ಗ್ರಿಲ್ ಸೇವೆ, ಗ್ರಾನೇಟ್ ಸೇವೆ ಮಾಡಿಸಿದ್ದಾರೆ. ತಮ್ಮ ಊರಿಗೆ ಮತ್ತು ದೇವರಿಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದಾತ್ತ ಉದ್ದೇಶದಿಂದ ಮಾಡಲಾದ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದತ್ತು ಚವ್ಹಾಣ್, ವಾಲು ಪವಾರ, ಎಎಸ್ಐ ವಿಠ್ಠಲ್ ರಾಠೋಡ, ದೆಹಲಿ ಪೊಲೀಸ್ ಮೋಹನ ಚವ್ಹಾಣ್, ದೇವಸಿಂಗ ಚವ್ಹಾಣ, ಡಾಕು ರಾಠೋಡ, ನಾಗಣ್ಣಗೌಡ ಕಂಠ, ಚಂದು ಜಾಧವ ವೇದಿಕೆಯಲ್ಲಿದ್ದರು.
ಖೇಮು ರಾಠೋಡ, ಜಾನು ರಾಠೋಡ, ರಾಜು ರಾಠೋಡ, ಸಾಗರ ರಾಠೋಡ, ತೇಜು ರಾಠೋಡ, ಭರತ ರಾಠೋಡ, ಶರಣ ಕಾರಬಾರಿ ಮತ್ತು 4 ತಾಂಡಾಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.