ನಾಲವಾರ: ಜ.19ರಂದು ಕೋರಿಸಿದ್ದೇಶ್ವರ ರಥೋತ್ಸವ, ಸಿದ್ಧತೋಟೇಂದ್ರ ಪ್ರಶಸ್ತಿ ಪ್ರದಾನ‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಕಲ್ಯಾಣ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲೊಂದಾದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಲವಾರ ಕ್ಷೇತ್ರ ನವವಧುವಿನಂತೆ ಸಿಂಗಾರಗೊಂಡಿದೆ.

ಜಾತ್ರಾ ಮಹೋತ್ಸವದ ನಿಮಿತ್ಯ ವಾರದಿಂದಲೆ ಶ್ರೀಮಠದಲ್ಲಿ ಧಾರ್ಮಿಕ ಪುರಾಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿವೆ.‌‌

ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವವು ಜ.18, 19 ಮತ್ತು 20 ರಂದು ಅದ್ಧೂರಿಯಾಗಿ ನಡೆಯಲಿದೆ.

ಮಧ್ಯರಾತ್ರಿ ‘ತನಾರತಿ’
ಜ.18 ರಂದು ರಾತ್ರಿ 8 ಗಂಟೆಗೆ ಜಾತ್ರಾ ಮಹೋತ್ಸವದ ಪ್ರಯುಕ್ತ ಶಿವಾನುಭವ ಚಿಂತನ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ ದಕ್ಷಿಣ ಭಾರತದ ದೀಪಮೇಳವೆಂದೆ ಪ್ರಖ್ಯಾತಿಯಾದ ಭಕ್ತರ ಹರಕೆಯ ‘ತನಾರತಿ’ ಮಹೋತ್ಸವ ಜರುಗುವುದು.

ಜ.19ರಂದು ಸಂಜೆ 7 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕೋರಿಸಿದ್ಧೇಶ್ವರ ರಥೋತ್ಸವ ಜರುಗುವುದು. ರಾಜ್ಯ ಹಾಗೂ ಹೊರ ರಾಜ್ಯದ ಸಹಸ್ರಾರು ಭಕ್ತರು ಭಾಗವಹಿಸಿ ರಥೋತ್ಸವದ ಮೆರುಗು ಹೆಚ್ಚಿಸಲಿದ್ದಾರೆ. ರಥೋತ್ಸವಕ್ಕೂ ಮುನ್ನ ವಿವಿಧ ರೀತಿಯ ಮದ್ದು ಸುಡುವ ಕಾರ್ಯಕ್ರಮ ಹಾಗೂ ಜಾನಪದ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ.

ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿಗೆ ನಟ ಶ್ರೀನಾಥ ಆಯ್ಕೆ
ಸದ್ಗುರು ಶ್ರೀ ಕೋರಿಸಿದ್ದೇಶ್ವರ ಶ್ರೀಮಠದ ವತಿಯಿಂದ ಕಳೆದ ಅನೇಕ ವರ್ಷಗಳಿಂದ ನಾಡಿನ ಗಣ್ಯಸಾಧಕರಿಗೆ ಕೊಡಮಾಡುವ ‘ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ’
ಸಮಾರಂಭ ನಡೆಯಲಿದೆ.

ಜ.19 ರಂದು ಸಂಜೆ 7 ಕ್ಕೆ ಭವ್ಯ ರಥೋತ್ಸವದ ನಂತರ ನಡೆಯಲಿರುವ ಸಮಾರಂಭದಲ್ಲಿ ಕನ್ನಡ ನಾಡಿನ ಹಿರಿಯ ಕಲಾವಿದರು ಹಾಗೂ ಖ್ಯಾತ ಚಲನಚಿತ್ರ ನಟ ಶ್ರೀನಾಥ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮರುದಿನ ಮಂಗಳವಾರ ಶ್ರೀಮಠದ ಆವರಣದಲ್ಲಿ ಬೃಹತ್ ಜಾನುವಾರು ಜಾತ್ರೆ ನಡೆಯಲಿದೆ, ಮೂರು ದಿನಗಳ ಕಾಲ ವಿವಿಧ ತಳಿಯ ಸಾವಿರಾರು ಜಾನುವಾರುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡ ಅತ್ಯತ್ತಮ ಜಾನುವಾರಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು.

ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಆಂಧ್ರಪ್ರದೇಶದ, ಮಹಾರಾಷ್ಟ್ರ, ತೆಲಂಗಾಣ ಮತ್ತು ಗೋವಾ ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ, ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ನಾಲವಾರ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಸರ್ವ ರೈಲುಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.‌

ಭಕ್ತರ ದಾಸೊಹಕ್ಕಾಗಿ ಬೃಹತ್ ದಾಸೋಹ ಮನೆ ಸಿದ್ಧಗೊಂಡಿದ್ದು, ನೂರಾರು ಬಾಣಸಿಗರು ವಿವಿಧ ಬಗೆಯ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ದಾಸೋಹಕ್ಕಾಗಿ ರೊಟ್ಟಿ ಮತ್ತು ವಿವಿಧ ದವಸ ಧಾನ್ಯಗಳು ಸಮರ್ಪಿಸುತ್ತಿದ್ದಾರೆ.

ಶ್ರೀಮಠವು ವರ್ಣರಂಜಿತ ವಿದ್ಯುತ್ ದ್ವೀಪಗಳಿಂದ ಅಲಂಕೃತವಾಗಿದ್ದು, ನವವಧುವಿನಂತೆ ಶ್ರೀಕ್ಷೇತ್ರ ನಾಲವಾರ ಕಂಗೊಳಿಸುತ್ತಿದೆ. ಶ್ರೀಮಠದ ಆವರಣ ಸೇರಿದಂತೆ ಇಡಿ ಗ್ರಾಮ ಸ್ವಚ್ಛಗೊಳಿಸಲಾಗಿದೆ, ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗಿವೆ.

ನಾಡಿನ ಪ್ರತಿಷ್ಠಿತ ಮಠಾಧೀಶರು, ಸಚಿವರು, ಶಾಸಕರು ಮತ್ತು ಕವಿ-ಕಲಾವಿದರು ಭಾಗವಹಿಸುವ ಜಾತ್ರೆ ಕೇವಲ ಧಾರ್ಮಿಕ ಯಾತ್ರೆಯಾಗಿರದೆ ಕಲ್ಯಾಣ ಕರ್ನಾಟಕ ಭಾಗದ ಸಾಂಸ್ಕೃತಿಕ ಜಾತ್ರೆಯಾಗಿ ಆಚರಣೆಗೊಳ್ಳುತ್ತಿದೆ, ನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಲು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *