ಸುದ್ದಿ ಸಂಗ್ರಹ ಕಲಬುರಗಿ
ಪರಾಗಸ್ಪರ್ಷ ಕ್ರಿಯೆಯಿಂದ ಉತ್ತಮ ಇಳುವರಿ ಸಾಧ್ಯ. ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ ಸಮತೋಲನವಾಗಿಡಲು ಪಕ್ಷಿಗಳು ಕಾರಣವಾಗಿವೆ. ಆದ್ದರಿಂದ ಪಕ್ಷಿ ಸಂಕುಲದ ರಕ್ಷಣೆ ತುಂಬಾ ಅಗತ್ಯ ಎಂದು ಉಪನ್ಯಾಸಕ, ಪಕ್ಷಿ ಪ್ರೇಮಿ ಶಂಕ್ರೆಪ್ಪ ಹೊಸದೊಡ್ಡಿ ಹೇಳಿದರು.
ನಗರದ ಹೈಕೋರ್ಟ್ ರಿಂಗ್ ರಸ್ತೆಯ ನವಲದಿ ಬಡಾವಣೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ್ರೀಯ ಪಕ್ಷಿ ದಿನಾಚರಣೆ’ ನಿಮಿತ್ಯ ಪಕ್ಷಿಗಳಿಗೆ ನೀರು, ಕಾಳು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷಿಗಳು ವಿವಿಧ ಪ್ರಕಾರದ ಕೀಟ, ಹುಳ-ಹುಪ್ಪಟಿಗಳನ್ನು ತಿನ್ನುವ ಮೂಲಕ ಮಣ್ಣು ಮತ್ತು ಬೆಳೆ ರಕ್ಷಿಸುತ್ತವೆ.ಇದರಿಂದ ಮಣ್ಣು ಸತ್ವಯುತವಾಗುತ್ತದೆ ಎಂದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾಗಿದೆ. ಪಕ್ಷಿಗಳು ಪರಿಸರ ಸ್ಥಿತಿಯ ಪ್ರಮುಖ ಸೂಚಕಗಳು. ಇವುಗಳು ಪ್ರಮುಖವಾಗಿ ಜೈವಿಕ ಕೀಟನಾಶಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಕೃತಿ ಸಮತೋಲನ ಭಾಗವಾಗಿವೆ. ಅರಣ್ಯ ನಾಶ, ಜೀವ ವೈವಿಧ್ಯತೆಯಲ್ಲಿ ಏರು-ಪೇರು, ಮೊಬೈಲ್ ತರಂಗಗಳು, ಜಾಗತಿಕ ತಾಪಮಾನ, ಬೇಟೆ ಸೇರಿದಂತೆ ಮುಂತಾದ ಕಾರಣಗಳಿಂದ ಇಂದು ಅನೇಕ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಪಕ್ಷಿಗಳಿಗೆ ನೀರು ಮತ್ತು ಕಾಳುಗಳನ್ನಿಟ್ಟು ಸಂರಕ್ಷಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸುಷ್ಮಾ ಎಸ್.ಹೊಸದೊಡ್ಡಿ, ಸಿಂಚನಾ, ಆರೂಷಿ, ಶಿವಪ್ಪ, ನಿರಂಜನ ಸೇರಿದಂತೆ ಅನೇಕರು ಇದ್ದರು.