ಗ್ರಾಹಕರು ವ್ಯವಹರಿಸುವಾಗ ಜಾಗೃತಿ ವಹಿಸುವುದು ಅಗತ್ಯ: ಎಚ್.ಬಿ ಪಾಟೀಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಆನಲೈನ್ ಮತ್ತು ಮಾರಾಟ ಕಂಪನಿಗಳಿಂದ ಬೆಲೆ, ಪ್ರಮಾಣ, ಖಾತ್ರಿ, ಪರಿಶುದ್ಧತೆ ಸೇರಿದಂತೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಅನ್ಯಾಯವಾಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಗ್ರಾಹಕರು ವ್ಯವಹರಿಸುವಾಗ ಬಹಳಷ್ಟು ಜಾಗೃತಿ ವಹಿಸುವುದು ಅಗತ್ಯ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬೆಳಿಗ್ಗೆ ಜರುಗಿದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ಮಾರುಕಟ್ಟೆಯ ಆಧಾರ ಸ್ಥಂಭವಾಗಿದ್ದಾರೆ. ಸರಕು ಮತ್ತು ಸೇವೆಯ ಬಗ್ಗೆ ಸುರಕ್ಷತೆ, ಮಾಹಿತಿ ಪಡೆಯುವದು, ಆಯ್ಕೆ ಮಾಡಿಕೊಳ್ಳುವುದು, ಆಲಿಸುವದು, ಕುಂದುಕೊರತೆ ನಿವಾರಿಸಿಕೊಳ್ಳುವದು, ಗ್ರಾಹಕರ ಶಿಕ್ಷಣ ಪಡೆಯುವುದು ಇವುಗಳು ಗ್ರಾಹಕರ ಹಕ್ಕುಗಳಾಗಿವೆ. ಹಕ್ಕುಗಳ ಬಗ್ಗೆ ಜಾಗೃತಿ, ಗುಣಮಟ್ಟದ ಅರಿವು, ದೂರು ನೀಡಲು ಸಿದ್ಧರಿರಬೇಕು, ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಿಸಬಾರದು, ನಗದು ರಶೀದಿಗಾಗಿ ಬೇಡಿಕೆ, ಸರಕುಗಳ ಆಯ್ಕೆ, ಗ್ರಾಹಕರ ಸಂಘಟನೆ, ಪರಿಸರ ರಕ್ಷಣೆ, ಅವಸರದಲ್ಲಿ ವಸ್ತುಗಳನ್ನು ಖರೀದಿಸಬಾರದು ಎಂಬ ಇವುಗಳು ಗ್ರಾಹಕರ ಕರ್ತವ್ಯಗಳಾಗಿವೆ. ಗ್ರಾಹಕರು ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ವ್ಯವಹರಿಸದರೆ, ಅನ್ಯಾಯವಾಗದಂತೆ ತಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಸ್ನೇಹಾ ಚವ್ಹಾಣ, ರುಕ್ಸಾನಾ ಪಟೇಲ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *